ಬೆಂಗಳೂರು: ಇತ್ತೀಚೆಗೆ ವಾಹನ ಕಳ್ಳರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಗಾಡಿಗಳನ್ನು ಕದಿಯಲು ಖದೀಮರು ನಾನಾ ಐಡಿಯಾಗಳನ್ನು ಹುಡುಕಿಕೊಂಡಿದ್ದಾರೆ. ಅಂತೆಯೇ ಇಲ್ಲೊಬ್ಬ ಖತರ್ನಾಕ್ ಕಳ್ಳ ದ್ವಿಚಕ್ರ ವಾಹನದ ಹ್ಯಾಂಡಲ್ಗೆ ಒದ್ದು ಕಳವುಗೈಯಲು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಕಳ್ಳನ ಕೈಚಳಕ ಅಲ್ಲೇ ಇದ್ದ ಸಿಸಿಟಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಖದೀಮ, ಗಾಡಿಯನ್ನು ಕದಿಯುವ ಸಲುವಾಗಿ ಹ್ಯಾಂಡಲ್ ಲಾಕ್ ಮುರಿಯಲು ಪ್ರಯತ್ನಿಸಿದ್ದಾನೆ. ದ್ವಿಚಕ್ರವಾಹನದ ಹ್ಯಾಂಡಲ್ಗೆ ಒದ್ದು ಹ್ಯಾಂಡಲ್ ಲಾಕ್ ಮುರಿದು ಹಾಕಲು ಯತ್ನಿಸಿದ್ದಾನೆ. ಆದರೆ ಈ ಪ್ರಯತ್ನದಲ್ಲಿ ಆತ ವಿಫಲನಾಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು
ಹೀಗೆ ಆತ ರಸ್ತೆ ಬದಿ ನಿಂತಿದ್ದ ಮೂರ್ನಾಲ್ಕು ವಾಹನಗಳನ್ನ ಕದಿಯಲು ಪ್ರಯತ್ನಿಸಿದ್ದಾನೆ. ಮೂರು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಇನ್ನೂ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ವಾಹನ ಮಾಲೀಕರು ದೂರು ನೀಡಿದ್ದಾರೆ. ಅಕ್ನಾಲೆಡ್ಜ್ ಮೆಂಟ್ ನೀಡಿದ್ದಾರಷ್ಟೆ ಹೊರತು ಖದೀಮನ ವಿರುದ್ಧ ಯಾವುದೇ ಎಫ್ಐಆರ್ ಮಾಡಿಲ್ಲ ಎಂದು ವಾಹನದ ಮಾಲೀಕ ಪವನ್ ಶೆಟ್ಟಿ ಆರೋಪಿಸಿದ್ದಾರೆ.
ವಾಹನ ಹ್ಯಾಂಡಲ್ ಒದ್ದ ಪರಿಣಾಮ ಗಾಡಿ ಡ್ಯಾಮೇಜ್ ಆಗಿದೆ. ಮಿರರ್ ಕೂಡ ಡ್ಯಾಮೇಜ್ ಆಗಿದೆ. ವಾಹನ ಕಳ್ಳನನ್ನ ಹಿಡಿಯದೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪವನ್ ಶೆಟ್ಟಿಯವರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.