ಚಂಡೀಗಢ: ಮಸೀದಿಯಲ್ಲಿ (Mosque) ನಮಾಜ್ (Namaz) ಮಾಡುತ್ತಿದ್ದವರ ಮೇಲೆ ಹಲ್ಲೆ (Assault) ನಡೆಸಿ, ಮಸೀದಿಯನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಗುರುಗ್ರಾಮದ ಪೊಲೀಸರು (Gurugram Police) 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಗುರುಗ್ರಾಮದ ಭೋರಾ ಕಲನ್ ಪ್ರದೇಶದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಸೀದಿಗೆ ನುಗ್ಗಿ, ಅಲ್ಲಿ ನಮಾಜ್ ಮಾಡಲು ಬಂದಿದ್ದವರನ್ನು ಥಳಿಸಿದ್ದಾರೆ. ಬಳಿಕ ಜೀವ ಬೆದರಿಕೆ ಒಡ್ಡಿದ್ದು, ಮಸೀದಿಯ ಗೇಟ್ಗೆ ಬೀಗ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಧಾರ್ಮಿಕ ಧ್ವಜ ಸುಟ್ಟ ಪ್ರಕರಣ- ಇಬ್ಬರ ಬಂಧನ
ಈ ಬಗ್ಗೆ ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸುಬೇದಾರ್ ನಾಜರ್ ಮೊಹಮ್ಮದ್, ಭೋರಾ ಕಲನ್ ಪ್ರದೇಶದಲ್ಲಿ ಕೇವಲ 4 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಬುಧವಾರ ನಮಾಜ್ ಮಾಡುತ್ತಿದ್ದ ವೇಳೆ ಮಸೀದಿಗೆ ನುಗ್ಗಿದ ಗುಂಪೊಂದು ನಮ್ಮ ಮೇಲೆ ಹಲ್ಲೆ ನಡೆಸಿದೆ. ಮಾತ್ರವಲ್ಲದೇ ನಮಗೆ ಈ ಪ್ರದೇಶ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ
ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗಳನ್ನು ಆಕ್ರೋಶಗೊಳಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ), 147 (ಗಲಭೆ), 148 (ಆಯುಧಗಳನ್ನು ಹಿಡಿದು ಗಲಭೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇಲ್ಲಿಯವರೆಗೆ ರಾಜೇಶ್ ಚೌಹಾಣ್, ಅನಿಲ್ ಭದೌರಿಯಾ ಮತ್ತು ಸಂಜಯ್ ವ್ಯಾಸ್ ಎಂಬ ಮೂವರು ಆರೋಪಿಗಳನ್ನು ಗುರುತಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.