ಬೀದರ್: ನಗರದಲ್ಲಿ (Bidar) ಎಟಿಎಂಗೆ ತಂಬುವ ಹಣವನ್ನು ದೋಚಿದ್ದ (ATM Robbery Case) ದುಷ್ಕರ್ಮಿಗಳ ಗುಂಡೇಟು ತಿಂದಿದ್ದ ಸಿಬ್ಬಂದಿ ಶಿವಕುಮಾರ್ ಗುನ್ನಳ್ಳಿ, ಚಿಕಿತ್ಸೆ ಪಡೆದು ಹೈದ್ರಾಬಾದ್ನ ಖಾಸಗಿ ಆಸ್ಪತೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೀದರ್ ನಿವಾಸಕ್ಕೆ ಬಂದಿರುವ ಅವರು, ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ನಾನು ಬದುಕಿ ಬಂದಿದ್ದು ಪುನರ್ಜನ್ಮವಾಗಿದೆ. ಅಂದು ದರೋಡೆಕೋರರಿಂದ ಹಣದ ಪೆಟ್ಟಿಗೆ ರಕ್ಷಣೆ ಮಾಡಲು ಹೋಗಿ ನಾನು ಗುಂಡೇಟು ತಿಂದೆ. ನಮ್ಮ ಜೊತೆ ಗನ್ ಮ್ಯಾನ್ ಯಾಕೆ ಬಂದಿರಲಿಲ್ಲ ಎಂಬುದು ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ದರೋಡೆಕೋರರ ವಿರುದ್ಧ ನಾನು ಯಾವುದೇ ಆಯುಧವಿಲ್ಲದೇ ಹೋರಾಡಿದ್ದೆ. ನನ್ನ ಮೇಲೆ ಫೈರಿಂಗ್ ಆದ ತಕ್ಷಣ ಅಲ್ಲೇ ಕುಸಿದು ಬಿದ್ದೆ. ನಮ್ಮ ಕುಟುಂಬಕ್ಕೆ ನಾನೇ ಜೀವನಾಧಾರವಾಗಿದ್ದು, ಸರ್ಕಾರ ಏನಾದರೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವ ಖಂಡ್ರೆ ಮನೆಗೆ ಭೇಟಿ ನೀಡಿ ಸರ್ಕಾರಿ ನೌಕರಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಹಣವನ್ನು ನಮ್ಮ ಎಟಿಎಂನ ಸಿಎಂಸಿ ಎಜೆನ್ಸಿ ನೀಡಿದ್ದು, ಸರ್ಕಾರದಿಂದ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.