ನವದೆಹಲಿ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಬ್ರಾಹ್ಮಣ ಸಂಸ್ಕೃತಿಯಲ್ಲಿ ವಾಜಪೇಯಿ ಅವರ ಅಂತ್ಯಸಂಸ್ಕಾರವು ಶುಕ್ರವಾರ ಸಂಜೆ ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.
ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅಗ್ನಿ ಸ್ಪರ್ಶ ಮಾಡಿದರು. ಅಳಿಯ ರಂಜನ್ ಭಟ್ಟಾಯಾರ್ಯ, ಮೊಮ್ಮಗಳು ನಿಹಾರಿಕಾ ಭಟ್ಟಾಚಾರ್ಯ, ಸಂಬಂಧಿಕರು, ರಾಷ್ಟ್ರ ಹಾಗೂ ವಿದೇಶದ ಅನೇಕ ನಾಯಕರು ಭಾಗವಹಿಸಿ ಕಂಬನಿ ಮಿಡಿದರು.
ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ಗಣ್ಯಾತೀಗಣ್ಯರಿಗೆ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ಮುಖಂಡ ಹಾಗೂ ವಾಜಪೇಯಿ ಅವರ ಆಪ್ತ ಎಲ್.ಕೆ ಅಡ್ವಾಣಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಇನ್ನು ಅನೇಕ ಗಣ್ಯರು ವಾಜಪೇಯಿಗೆ ಮಾಲಾರ್ಪಣೆ ಸಮರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದರು. ಅಷ್ಟೇ ಅಲ್ಲದೇ 22 ರಾಜ್ಯಗಳ ಮುಖ್ಯಮಂತ್ರಿಗಳು ಅಗಲಿದ ನಾಯಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
https://youtu.be/av3twv3sJ5Q
ಬಳಿಕ ವಾಜಪೇಯಿ ಅವರ ಮೃತ ದೇಹವನ್ನು ಬಿಜೆಪಿ ಕಚೇರಿಯಲ್ಲಿ ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಗೂ ಅನೇಕ ನಾಯಕರು, ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಮಾಡಿದರು. ಬಳಿಕ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಚಿವರು ಹಾಗೂ ಬಿಜೆಪಿಯ ಕೆಲವು ನಾಯಕರು 4 ಕಿ.ಮೀ. ನಡೆದು ಸ್ಮೃತಿ ಸ್ಥಳಕ್ಕೆ ಬಂದರು.
ಅಂತ್ಯಸಂಸ್ಕಾರ ಸ್ಥಳದ ವಿಶೇಷ ಏನು?
ರಾಷ್ಟ್ರೀಯ ಸ್ಮೃತಿ ಸ್ಥಳವು ಯುಮುನಾ ನದಿ ದಂಡೆಯ ಮೇಲಿದೆ. ಇಲ್ಲಿಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್ಘಾಟ್ ಮತ್ತು ಶಾಂತಿವನವಿದೆ. ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ.
https://youtu.be/wTblWRfExVY
ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಭದ್ರತಾ ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ, ಭೂಪಡೆ ಮುಖ್ಯಸ್ಥ ಬಿಪಿನ್ ರಾವತ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ, ಏರ್ ಚೀಫ್ ಮಾರ್ಶಲ್ ಬೀರೇಂದ್ರ ಸಿಂಗ್ ದನೋವಾ ನಮನ ಸಲ್ಲಿಸಿದರು. ಅಂತ್ಯಕ್ರಿಯೆ ಸ್ಥಳದ ಸುತ್ತಲು ಗಣ್ಯರಿಗೆ ಕುಳಿತುಕೊಳ್ಳು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದಲೇ ಎಲ್ಲ ಅಂತ್ಯಕ್ರಿಯೆ ವೀಕ್ಷಿಸಿದರು.
ಅಫಘಾನಿಸ್ತಾನದ ಮಾಜಿ ರಾಷ್ಟ್ರಪತಿ ಹಮಿದ್ ಕರ್ಜಾಯಿ, ಭೂತಾನ್ ದೊರೆ ಜಿಗ್ಮೆ ಖೇಸರ್ ನಂಗ್ಯೆಲ್ ವಾಂಗ್ಚುಕ್, ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರಿಲ್ಲಾ, ಬಾಂಗ್ರಾದೇಶ್ ವಿದೇಶಾಂಗ ಸಚಿವ, ಬ್ರಿಟಿಷ್ ಹೈಕಮಿಷನರ್ ಸೇರಿದಂತೆ ಅನೇಕರು ವಾಜಪೇಯಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಇತ್ತ ಕರ್ನಾಟಕದಿಂದ ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಲಕ್ಮಣ್ ಸವದಿ ಬಿಎಸ್ವೈ ಪುತರ ವಿಜಯೇಂದ್ರ ಹಾಜರಿದ್ದರು.
https://youtu.be/uN8F42yEkaQ