ಅಟಲ್ ಬಿಹಾರಿ ವಾಜಪೇಯಿ ಅವರು ಶಿಸ್ತಿನ ಸಿಪಾಯಿ, ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಸಾಕಷ್ಟು ದೂರದವರೆಗೆ ಕಾಲ್ನಡಿಗೆಯಲ್ಲಿ ಸುತ್ತಾಡಿ ಬರುವುದು ಅವರ ದೈನಂದಿನ ಕ್ರಮವಾಗಿತ್ತು. ಅವರ ಸಾಕು ನಾಯಿಗಳ ಜೊತೆಗೂಡಿ ಸುತ್ತಾಡುವುದು ಒಂದು ವಿಶೇಷ. ಸುತ್ತಾಟದ ಅವಧಿಯಲ್ಲಿ ಯಾರೊಂದಿಗೂ ಮಾತನಾಡದೇ ಇರುವುದು ಅವರು ಅನುಸರಿಸಿಕೊಂಡು ಬಂದ ಕ್ರಮ. (ಪ್ರಧಾನಿಯಾದ ಮೇಲೆ ಬೆಳಗಿನ ವಾಯು ಸಂಚಾರ, ಅವರ ಬಂಗಲೆಯ ಸುತ್ತಮುತ್ತಲಿನ ಆವರಣದಲ್ಲಿ ಮಾತ್ರ ಮಾಡುತ್ತಿದ್ದರು).
ಬೆಳಗಿನ ಸುತ್ತಾಟದ ನಂತರ ವಾರ್ತಾ ಪತ್ರಿಕೆಗಳನ್ನು ಓದುವುದು ಮತ್ತು ವ್ಯಂಗ್ಯ ಚಿತ್ರಗಳನ್ನು ಆಸಕ್ತಿಯಿಂದ ನೋಡುವುದು ಅವರ ನಿತ್ಯ ಪದ್ಧತಿಯಾಗಿತ್ತು. ಮನರಂಜನೆಗಾಗಿ ಸಂಗೀತ ಕೇಳುವುದು, ಉತ್ತಮ ಚಲನಚಿತ್ರಗಳನ್ನು ನೋಡಿ ಆನಂದಿಸುವುದು ಅವರ ಅಭ್ಯಾಸ. ಓದುವ ಚಟ ಅವರಿಗೆ ಬಹಳ. ಎಲ್ಲರೂ ಈ ಚಟ ಬೆಳೆಸಿಕೊಳ್ಳಬೇಕೆಂಬುದೇ ಅವರ ಆಶಯ, ಗ್ವಾಲಿಯರ್ ನ ಸ್ವಂತ ಮನೆಯಲ್ಲಿ ಸಾರ್ವಜನಿಕ ವಾಚನಾಲಯ ಪ್ರಾರಂಭಿಸುವ ಉದ್ದೇಶವೂ ಅವರಿಗಿತ್ತು..
ಒಂಟಿಯಾಗಿ ಕುಳಿತು ಕವನ ರಚಿಸುವುದೆಂದರೆ ಅಟರ್ರವರಿಗೆ ಬಹಳ ಸಂತಸ. ತಾವು ಬರೆದ ಕವನಗಳನ್ನು ಅವರು ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಅವರು ತಮ್ಮ ಹುಟ್ಟುಹಬ್ಬದಂದು ಮನೆ ಮಂದಿಗೆ ತಾವು ಬರೆದ ಕವನವನ್ನು ಕೊಡುಗೆಯಾಗಿ ನೀಡುವುದನ್ನು ಒಂದು ಸಂಪ್ರದಾಯವಾಗಿ ಮಾಡಿಕೊಂಡಿದ್ದರು. ಕವನ ಬರೆಯಲಿ, ಸ್ವಯಂಸೇವಕನಾಗಿ ದುಡಿಯಲಿ, ರಾಜಕಾರಣದಲ್ಲಿ ತೊಡಗಲಿ, ಪ್ರಧಾನಿಯ ಪಟ್ಟಕ್ಕೇರಲಿ, ಇವುಗಳೆಲ್ಲವುಗಳಿಗಿಂತ ಪ್ರಮಾಣಿಕತೆಯೇ ಮುಖ್ಯ ಎನ್ನುತ್ತಾರೆ.
ಭಾರತದ ಯಾವ ರಾಜಕೀಯ ನಾಯಕನಲ್ಲೂ ಇರದ ಮಹಾನ್ ಆದರ್ಶ ಗುಣಗಳು ಇವರಲ್ಲಿ ಮನೆ ಮಾಡಿತ್ತು. ವಾಜಪೇಯಿ ಅವರು ಯಾವುದೇ ಸ್ಥಳಕ್ಕೆ ಬಂದು ಭಾಷಣ ಮಾಡುತ್ತಾರೆಂದರೆ ಆ ಸ್ಥಳಕ್ಕೆ ಲಕ್ಷಾಂತರ ಜನ ಬಂದು ಸೇರುತ್ತಿದ್ದರು. ಅವರ ಭಾಷಣಗಳು, ಕಾವ್ಯಮಯ, ಭಾಷಣ ಅತಿಮಹತ್ವದಾಗಿ ಎದ್ದು ಕಾಣುತ್ತದೆ. ರಾಜಕೀಯ ನಾಯಕರಲ್ಲಿ ಸಾಹಿತ್ಯ ಅಡಗಿರುತ್ತದೆಂದರೆ ಅದು ವಾಜಪೇಯಿ ಅವರ ಮನದಲ್ಲಿ ಕರಗತವಾಗಿತ್ತು. ಯಾವ ಕವಿಗಿಂತಲೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಅರ್ಥಪೂರ್ಣವಾಗಿ ಸಾಹಿತ್ಯವನ್ನು, ನಮ್ಮ ಪರಂಪರೆಯನ್ನು ಗಟ್ಟಿಯಾಗಿ ಹೇಳುವ ಭರವಸೆಯ ಮುತ್ಸದ್ಧಿ ನಾಯಕರಾಗಿದ್ದರು ವಾಜಪೇಯಿ.
(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv