ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕುರಿತಾದ ಸಿನಿಮಾ ಮಾಡಲು ನಿರ್ಮಾಪಕ ವಿನೋದ್ ಭಾನುಶಾಲಿ ಮುಂದಾಗಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿರುವ ಅವರು ಸೂಕ್ತ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಥೇಟ್ ವಾಜಪೇಯಿ ರೀತಿಯಲ್ಲಿ ಕಾಣುವಂತಹ ವ್ಯಕ್ತಿಗಾಗಿ ಅಥವಾ ಅವರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಕಲಾವಿದನಿಗಾಗಿ ಅವರು ಹುಡುಕಾಟ ಆರಂಭಿಸಿದ್ದಾರೆ.
ಭಾರತ ಅಭಿವೃದ್ಧಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಕೊಟ್ಟ ಕೊಡುಗೆ ಅಪಾರ. ಅವರನ್ನು ಅಜಾತಶತ್ರು ಎಂದೇ ಕರೆಯಲಾಗುತ್ತಿತ್ತು. ಅವರ ನಡೆ, ನುಡಿ ಶ್ರೇಷ್ಠವಾದದ್ದು. ಅವರು ಕೇವಲ ರಾಜಕಾರಣಿ ಮಾತ್ರವಾಗಿರಲಿಲ್ಲ. ಕವಿ ಕೂಡ ಆಗಿದ್ದರು. ಅವರ ಭಾಷಣಗಳನ್ನು ಕೇಳಲೆಂದೇ ಲಕ್ಷಾಂತರ ಜನರು ಸೇರುತ್ತಿದ್ದರು. ಹಾಗಂತ ಅವರ ಬದುಕಿನ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಅನೇಕ ಏಳುಬೀಳುಗಳನ್ನೂ ಅವರು ಕಂಡಿದ್ದರು. ಅದೆಲ್ಲವನ್ನೂ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಿದ್ದಾರಂತೆ ನಿರ್ಮಾಪಕರು. ಇದನ್ನೂ ಓದಿ:ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
ಸ್ಕ್ರಿಪ್ಟ್ ಸಿದ್ಧವಾಗಿದ್ದು ನಿರ್ದೇಶಕರನ್ನೂ ಕೂಡ ಗೊತ್ತು ಮಾಡುತ್ತಿದ್ದಾರಂತೆ. ಇದೊಂದು ಬಯೋಪಿಕ್ ಆಗಿರುವುದರಿಂದ ವಾಜಪೇಯಿ ಅವರ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆಯಂತೆ. ಹಾಗಾಗಿ ಆ ಪಾತ್ರವನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋಗುವಂತಹ ನಟ ಅವರಿಗೆ ಬೇಕಾಗಿದೆಯಂತೆ. ನಟ ಸಿಕ್ಕ ತಕ್ಷಣವೇ ಉಳಿದ ಸಂಗತಿಗಳನ್ನು ಹೇಳಿಕೊಳ್ಳುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.