ಲಕ್ನೋ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಸಮಾರಂಭವೊಂದರಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಷಣ ಮಾಡುವಾಗ, ʻಸೇನೆಯಲ್ಲಿ ಉದ್ಯೋಗಾವಕಾಶ ಕೊಡಿʼ ಎಂದು ಯುವಕರ ಗುಂಪೊಂದು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿರುವ ಪ್ರಸಂಗ ನಡೆದಿದೆ.
ಗೊಂಡಾ ಜಿಲ್ಲೆಯಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ಭಾಷಣಕ್ಕೆ ವೇದಿಕೆ ಸಿದ್ಧವಾಗಿತ್ತು. ರಾಜನಾಥ್ ಸಿಂಗ್ ಅವರು ಮಾತನಾಡಲು ಆರಂಭಿಸಿದಾಗ, ಯುವಕರ ಗುಂಪು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಸೇನೆಯಲ್ಲಿ ನೇಮಕ ಮಾಡಿಕೊಳ್ಳಿ ಎಂದು ಯುವಕ ಕೂಗಿ ಕೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!
ʼಸೇನಾ ಭಾರತಿ ಚಲು ಕರೋ (ಸೇನೆಯಲ್ಲಿ ನೇಮಕಾತಿ ಆರಂಭಿಸಿ), ಹಮಾರಿ ಮನ್ಜೆ ಪೂರಿ ಕರೋ (ನಮ್ಮ ಬೇಡಿಕೆಯನ್ನು ಈಡೇರಿಸಿ) ಎಂದು ಯುವಕರು ಘೋಷಣೆ ಮೂಲಕ ಬೇಡಿಕೆ ಇಟ್ಟಿದ್ದಾರೆ. ಯುವಕರ ಬೇಡಿಕೆಯನ್ನು ಅರಿತ ರಕ್ಷಣಾ ಸಚಿವರು, ಚಿಂತಿಸಬೇಡಿ.. ಶೀಘ್ರವೇ ಕ್ರಮವಹಿಸುತ್ತೇವೆ ಎಂದು ಭರವಸೆಯ ನುಡಿಯನ್ನಾಡಿ, ಯುವಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.
ನಿಮ್ಮ ಚಿಂತೆ ನಮಗೂ ಇದೆ. ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಕೆಲವು ತೊಂದರೆಗಳಿವೆ ಎಂದು ಯುವಕರಿಗೆ ಮನವರಿಕೆ ಮಾಡಲು ಸಚಿವರು ಯತ್ನಿಸಿದ್ದಾರೆ. ಸಚಿವರಿಂದ ಈ ಮಾತು ಬರುತ್ತಿದ್ದಂತೆ, ಯುವಕರೆಲ್ಲರೂ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್
ಬಿಜೆಪಿ ಕಳೆದ ವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಅವಕಾಶಗಳ ಭರವಸೆ ನೀಡಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು, ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಪ್ರಕಟವಾಗಲಿದೆ.