ಹಾಸನ: ಅರಸೀಕೆರೆ ನಗರಸಭೆಯ ಅನರ್ಹಗೊಂಡ ಸದಸ್ಯ ಹರ್ಷವರ್ಧನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೆಡಿಎಸ್ನಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಹರ್ಷವರ್ಧನ್ ಅನರ್ಹಗೊಂಡಿದ್ದರು. ನಿನ್ನೆ ಹೊಟೆಲ್ನಲ್ಲಿ ಊಟ ಮಾಡುವ ವೇಳೆ ಶಾಸಕ ಶಿವಲಿಂಗೇಗೌಡ ಮತ್ತು ಅವರ ಆಪ್ತ ಸಮಿವುಲ್ಲಾ ಕುಮ್ಮಕ್ಕಿನಿಂದ ರಾಘು, ಜಗ್ಗು, ಪ್ರವೀಣ್ ಸೇರಿದಂತೆ ಐವರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಹರ್ಷವರ್ಧನ್ ಆರೋಪ ಮಾಡಿದ್ದಾರೆ. ಗಾಯಾಳು ಹರ್ಷವರ್ಧನ್ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಟೆಲ್ ಒಳಗೆ ಗಲಾಟೆ ನಡೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಊಟಕ್ಕೆ ಕುಳಿತವರ ಮೇಲೆ ಏಕಾಏಕಿ ಹಲ್ಲೆ ಯತ್ನ ನಡೆದಿದೆ. ಈ ವೇಳೆ ಪ್ರತಿರೋಧ ತೋರಿದಾಗ ಹಲವರು ಸೇರಿ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ನಾವು ಜೆಡಿಎಸ್ ತೊರೆದ ಕಾರಣ ನಮ್ಮ ಮೇಲಿನ ಸಿಟ್ಟಿಗಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್
ಘಟನೆ ಸಂಬಂಧ ರಾಘು, ಜಗ್ಗು, ಪ್ರವೀಣ್ ಸೇರಿ ಐವರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಹರ್ಷ ವಿರುದ್ಧವೂ ದೂರು ದಾಖಲಾಗಿದೆ. ತಮ್ಮ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಘು ನೀಡಿದ ದೂರು ಆಧರಿಸಿ ಹರ್ಷ ವಿರುದ್ಧ ಪ್ರತಿದೂರು ದಾಖಲಾಗಿದೆ. ಪರಸ್ಪರ ದೂರು ಪ್ರತಿದೂರು ದಾಖಲಿಸಿಕೊಂಡ ಅರಸೀಕೆರೆ ನಗರಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ