ಗುವಾಹಟಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ರಾಮೇಶ್ವರ್ ತೇಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಲಿ ಚಿತ್ರದ ವೀಡಿಯೋವೊಂದು ಪ್ರಸಾರವಾದ ಘಟನೆ ನಡೆದಿದೆ.
ಇಂಡಿಯನ್ ಆಯಿಲ್ನಿಂದ ಟಿನ್ಸುಕಿಯಾದಲ್ಲಿ ಮೆಥನಾಲ್ ಮಿಶ್ರಿತ ಒ-15 ಪೆಟ್ರೋಲ್ನ ಪೈಲಟ್ ರೋಲ್ಔಟ್ ಬಿಡುಗಡೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರೊಜೆಕ್ಟರ್ ಆಪರೇಟರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯೇನು?: ತಿನ್ಸುಕಿಯಾದಲ್ಲಿ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಅದೇ ವೇಳೆಗೆ ವೇದಿಕೆಯಲ್ಲಿದ್ದ ಪರದೆಯ ಮೇಲೆ ಮೆಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯ ವೀಡಿಯೋ ಕ್ಲಿಪ್ಗಳು ಬರುತ್ತಿದ್ದವು. ಆ ವೇಳೆ ನೀಲಿ ಚಿತ್ರ ಬಿಡುಗಡೆಯಾಗಿದ್ದು, ಸುಮಾರು 2-3 ಸೆಕೆಂಡ್ಗಳ ಕಾಲ ವೀಡಿಯೋ ಪ್ರಸಾರವಾಗಿತ್ತು. ಇದರಿಂದಾಗಿ ನೆರೆದವರಿಗೆಲ್ಲರಿಗೂ ಮುಜುಗರವಾಗಿತ್ತು. ಇದನ್ನೂ ಓದಿ: ಪುಟಿನ್ಗೆ ಕ್ಯಾನ್ಸರ್ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!
ಘಟನೆಗೆ ಸಂಬಂಧಿಸಿ ಮಾತನಾಡಿದ ತೇಲಿ, ಆ ಸಮಯದಲ್ಲಿ ನಾನು ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರ ಭಾಷಣವನ್ನು ಕೇಳುತ್ತಿದ್ದೆ. ನಾನು ಪರದೆಯತ್ತ ನೋಡುತ್ತಿರಲಿಲ್ಲ ಮತ್ತು ಅದರ ಬಗ್ಗೆ ತಿಳಿದಿರಲಿಲ್ಲ. ನಂತರ, ನನ್ನ ಪಿಎ ಘಟನೆಯ ಬಗ್ಗೆ ತಿಳಿಸಿದರು. ಡಿಸಿ ಕೂಡ ಅಲ್ಲೇ ಕುಳಿತಿದ್ದರು. ತಕ್ಷಣವೇ ತನಿಖೆ ಆರಂಭಿಸುವಂತೆ ಸೂಚಿಸಿದ್ದೇನೆ. ಇದು ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಎನ್ಇಪಿ ಜಾರಿಯಲ್ಲಿ ಕರ್ನಾಟಕ ಬೆಸ್ಟ್: ಅಮಿತ್ ಶಾ