ದಿಸ್ಪುರ: ಅಸ್ಸಾಂ ಜನತೆ ಕಳೆದ 15 ದಿನಗಳಿಂದ ಪ್ರವಾಹದ ಭೀಕರತೆಗೆ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಅಸ್ಸಾಂನ ಸಚಿವರೊಬ್ಬರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ನೆರವಿಗೆ ನಿಂತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರರಾಗಿದ್ದಾರೆ.
ಹೌದು, ರಾಜ್ಯದ ಮುಳುಗಡೆಯಾದ ಪ್ರದೇಶದಲ್ಲಿ ಸಾರಿಗೆ ಸಚಿವ ಪರಿಮಾಲ್ ಸುಕ್ಲಬೈದ್ಯ ಅವರು ಸ್ವತಃ ಅಂಬಿಗನಾಗಿ ದೋಣಿ ಮೂಲಕ, ಡಯಾಲಿಸಿಸ್ ಮಾಡಿಸಬೇಕಿದ್ದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ
ಸುಕ್ಲಬೈದ್ಯ ಅವರು ಮರದ ದೋಣಿಗೆ ಸ್ವತಃ ಅಂಬಿಗರಾಗಿ ಹುಟ್ಟು ಹಾಕಿ ಬರಾಕ್ ಕಣಿವೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಮತ್ತು ಅದರ ಉಪನದಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿವೆ. ರಾಜ್ಯದ ಒಟ್ಟು 36 ಜಿಲ್ಲೆಗಳ ಪೈಕಿ 32 ರಲ್ಲಿ ಭೂಪ್ರದೇಶಗಳು ಮುಳುಗಡೆಯಾಗಿವೆ. ಸಾರಿಗೆ ಸಚಿವರು ಕ್ಯಾಚಾರ್ನ ಸಿಲ್ಚಾರ್ನಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಮೂರು ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಬರಾಕ್ ಕಣಿವೆಯಲ್ಲಿನ ಪ್ರವಾಹ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್ನಲ್ಲಿ ಬಂಡಾಯ ಶಾಸಕರು ಫುಲ್ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗುರುವಾರ ಮತ್ತಷ್ಟು ಭೀಕರವಾಗಿದ್ದು, 30 ಜಿಲ್ಲೆಗಳಲ್ಲಿ 45.34 ಲಕ್ಷ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.