ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು, ಜೂಜು ಅಡ್ಡೆ ಮೇಲೆ ಕಾರ್ಕಳ ಎಎಸ್ ಪಿ ಪಿ. ಕೃಷ್ಣಕಾಂತ್ ದಾಳಿ ಮಾಡಿ 14 ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಸುಮಾರು 13 ಲಕ್ಷ ಮೌಲ್ಯದ ಸೊತ್ತು ವಶವಾಗಿದೆ.
ಬಂಧಿತರನ್ನು ಕೃಷ್ಣ ಮಲ್ಪೆ ರಾಜೇಶ್, ಮನೋಜ್, ಜಗದೀಶ್ ಕುಂದರ್, ಅಕ್ಷಯ್ ಈರಪ್ಪ ಕಟ್ಟಗಿ, ನಿಟ್ಟೂರು, ಶ್ರೀನಿವಾಸ್ ನಿಟ್ಟೂರು, ನವೀನ್ ಕುಮಾರ್, ನಿಂಗಪ್ಪ ಚಲವಾದಿ, ಮುಕ್ತುಂ ಹುಸೇನ್ ತಹಶೀಲ್ದಾರ್, ಸುಜಿತ್, ಮಲ್ಪೆ, ಕೃಷ್ಣ, ಶಂಕರ್ ಕೋಟ್ಯಾನ್, ಮಂಜುನಾಥ್ ಕೆ., ಮಂಜುನಾಥ್ ಕಾರ್ನಾಡು ಎಂದು ಗುರುತಿಸಲಾಗಿದೆ.
ಮೇ 31 ರಂದು ರಾತ್ರಿ ಪುತ್ತೂರು ಗ್ರಾಮದ ನಿಟ್ಟೂರು ಪೂಜಾ ಮಾರ್ಬಲ್ಸ್ ಸಮೀಪ ಶ್ರೀನಿವಾಸ್ ಪೂಜಾರಿಯವರ ಮನೆಯ ಬದಿಯಲ್ಲಿರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ ಖಚಿತ ಮಾಹಿತಿ ಬಂದಿದೆ. ಎಸ್ ಪಿ ಆದೇಶದಂತೆ ಎಎಸ್ ಪಿ ಕೃಷ್ಣಕಾಂತ್ ಸ್ಥಳಕ್ಕೆ ದಾಳಿ ನಡೆಸಿ, ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ಆರೋಪಿಗಳ ವಶದಲ್ಲಿದ್ದ ಒಟ್ಟು ರೂ. 80,680 ನಗದು ಹಾಗೂ ವಿವಿಧ ಕಂಪನಿಯ ಸುಮಾರು ರೂ.20,500 ಮೌಲ್ಯದ ಒಟ್ಟು 16 ಮೊಬೈಲ್ ಗಳು, ಸುಮಾರು ರೂ. 11,00,000 ಮೌಲ್ಯದ 2 ಕಾರುಗಳು, ಅಂದಾಜು ರೂ. 1,40,000 ಮೌಲ್ಯದ 5 ಮೋಟಾರ್ ಸೈಕಲ್ಗಳು, ಹೀಗೆ ಒಟ್ಟು ಅಂದಾಜು 13,41,430 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.