ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮಾಲಂಬಿ ರಕ್ಷಿತ ಅರಣ್ಯದಲ್ಲಿ ಅಪರೂಪದ 6 ತಿಂಗಳ ಮಲಬಾರ್ ಪುನುಗುಬೆಕ್ಕನ್ನು ಮಾಂಸಕ್ಕಾಗಿ ಗುಂಡಿಟ್ಟ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಕೇರಿ ಗ್ರಾಮದ ಎಚ್.ಎಸ್.ಲೋಹಿತ್ ಹಾಗೂ ಎಚ್.ಆರ್.ಸುರೇಶ್ ಬಂಧಿತರು. ಕೋವಿಯಿಂದ ಗುಂಡು ಹೊಡೆದು ಮಾಂಸ ಮಾಡಿ ತಿನ್ನಲು ಮನೆಗೆ ಕೊಂಡೊಯ್ಯುತ್ತಿದ್ದ ಖಚಿತ ಮಾಹಿತಿ ಅನ್ವಯ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸ್ಥಳದಲ್ಲಿದ್ದ ಮೃತ ಪುನುಗು ಬೆಕ್ಕು, ಕೋವಿ, 1 ಟಾರ್ಚ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಶನಿವಾರಸಂತೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಲಬಾರ್ ಪುನುಗು ಬೆಕ್ಕು ಭಾರತದಲ್ಲೇ ವಿರಳವಾದ 300-400 ಸಂಖ್ಯೆಯಲ್ಲಿರುವ ಪ್ರಾಣಿ. ವನ್ಯಜೀವಿ ಸಂರಕ್ಷಣೆ ಕಾಯಿದೆ 1972 ರ ಪ್ರಕಾರ ಇದು ಅತಿ ವಿರಳ ಪ್ರಾಣಿಯಾಗಿದೆ.