ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಏಷ್ಯಾಕಪ್ ಟೂರ್ನಿಯಿಂದ ಹೊರೆಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ತಿಳಿಸಿದೆ.
ಏಷ್ಯಾಕಪ್ಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 28ರಂದು ನಡೆಯುವ ಭಾರತ, ಪಾಕಿಸ್ತಾನ ಹೈವೋಲ್ಟೇಜ್ ಕದನಕ್ಕೂ ಮೊದಲು ಟೀಂ ಇಂಡಿಯಾಕ್ಕೆ ಮೊದಲ ಆಘಾತವಾಗಿದೆ. 2022ರ ಏಷ್ಯಾ ಕಪ್ಗಾಗಿ ಯುಎಇಗೆ ತೆರಳುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ತಂಡದ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ದ್ರಾವಿಡ್ಗೆ ಕೊರೊನಾ ಪಾಸಿಟಿವ್ ಬಂದಿದೆ. ದ್ರಾವಿಡ್ಗೆ ಸೋಂಕಿನ ರೋಗ ಲಕ್ಷಣವು ಸೌಮ್ಯ ರೋಗಲಕ್ಷಣಗಳಿದೆ. ಈ ಹಿನ್ನೆಲೆಯಲ್ಲಿ ಆ.27ರಿಂದ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದು, ಕೊರೊನಾ ನೆಗೆಟಿವ್ ಬಂದ ನಂತರದಲ್ಲಿ ಮತ್ತೆ ತಂಡಕ್ಕೆ ಸೇರುವ ಸಾಧ್ಯತೆಯಿದೆ ಎಂದು ಬಿಸಿಸಿಐ ತಿಳಿಸಿದೆ.
ಜಿಂಬಾಬ್ವೆ ವಿರುದ್ಧ ಸೋಮವಾರ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಗೂ ತಂಡದ ಜತೆ ದ್ರಾವಿಡ್ ಇರಲಿಲ್ಲ. ಸತತ ಪಂದ್ಯಗಳ ಕಾರಣ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗೆ ಬಿಸಿಸಿಐ ವಿಶ್ರಾಂತಿ ನೀಡಿತ್ತು. ನಿನ್ನೆ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕ್ಲೀನ್ಸ್ವೀಪ್ ಮಾಡಿದೆ. ಇದನ್ನೂ ಓದಿ: ಶುಭಮನ್ ಗಿಲ್ ಚೊಚ್ಚಲ ಶತಕದ ಅಬ್ಬರ – ಕ್ಲೀನ್ಸ್ವೀಪ್ನಲ್ಲಿ ಸರಣಿಗೆದ್ದ ಭಾರತ
ಏಷ್ಯಾಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರ ವರೆಗೆ ನಡೆಯಲಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು, ವೇಗಿ ಜಸ್ಪ್ರೀತ್ ಬೂಮ್ರಾ ಅವರು ಬೆನ್ನು ನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್.ರಾಹುಲ್ ಅವರು ತಂಡಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ಗೆ ದಿನಗಣನೆ – ಇಂಡೋ-ಪಾಕ್ ಕದನದಲ್ಲಿ ಇರಲ್ಲ ಇಬ್ಬರು ಬೆಂಕಿ ಬೌಲರ್ಸ್