ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ಮಂಜುನಾಥ್ ಬಿ ನಾಗಬಾ (Manjunath Nagaba) ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ ‘ಗರುಡ ಪುರಾಣ’ (Garuda Purana) ಚಿತ್ರದ ಟೀಸರ್ (Teaser) ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಶಾಸಕರಾದ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಾನು ‘ಕಾಂತಾರ’ ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಕಾಂತಾರ ನನಗೆ ಹೆಸರು ತಂದುಕೊಟ್ಟ ಸಿನಿಮಾ. ಅವಕಾಶ ನೀಡಿದ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಗರುಡ ಪುರಾಣ ಚಿತ್ರದ ಕುರಿತು ಹೇಳಬೇಕಾದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ ಗರುಡ ಪುರಾಣ ಎಂದು ಹೆಸರಿಟ್ಟಿದ್ದೇವೆ. ಮೂರು ಆಯಾಮಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿ, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ನಮಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ರಾಜು ಗೌಡ ಹಾಗೂ ತಿಪ್ಪರಾಜು ಅವರಿಗೆ ಧನ್ಯವಾದ ಎಂದರು ಚಿತ್ರದ ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ನಾಗಬಾ.
ಚಿತ್ರದ ನಿರ್ಮಾಪಕರಾದ ಸಿಂಧು ಕೆ.ಎಂ ಹಾಗೂ ಬಿ.ಎಲ್ ಯೋಗೇಶ್ ಕುಮಾರ್ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾಯಕಿ ದಿಶಾ ಶೆಟ್ಟಿ (Disha Shetty), ಭಜರಂಗಿ ಖ್ಯಾತಿಯ ಚೆಲುವರಾಜು (Cheluvaraju), ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣದ ಕುರಿತು ಮಾಹಿತಿ ನೀಡಿದರು.
Web Stories