ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ( B.S. Yediyurappa) ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರವನ್ನ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ವಿರೋಧಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದಿನ ನಮ್ಮ ಸರ್ಕಾರದ ಮೇಲೆ ತನಿಖೆ ಶುರು ಮಾಡಿದ್ದಾರೆ. ತನಿಖೆಗೆ ನಾಗಮೋಹನ್ ದಾಸ್ ಸಮಿತಿ ಮಾಡಿ ಒಂದೂವರೆ ವರ್ಷ ಆಯ್ತು. ಅವರ ಆರೋಪ ನಿರಾಧಾರ ಎಂಬುದು ಈಗ ಸ್ಪಷ್ಟವಾಗಿದೆ ಎಂದಿದ್ದಾರೆ.
ಯಡಿಯೂರಪ್ಪನವರ ಮೇಲೆ ಸಚಿವ ಸಂಪುಟ ಸಭೆಯಲ್ಲಿ ತನಿಖೆ ಆಗಬೇಕು ಎಂಬ ಪ್ರಯತ್ನ ಮಾಡಿರುವುದು ಖಂಡನೀಯ. ಅಲ್ಲದೇ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ. ದ್ವೇಷದ ರಾಜಕೀಯ ಕೈಬಿಟ್ಟು ನಿಮ್ಮ ಆಡಳಿತ ಹೇಗೆ ಉತ್ತಮ ಮಾಡುವುದು ಎಂಬ ಬಗ್ಗೆ ಯೋಚಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಸರ್ಕಾರದಲ್ಲಿ ಬೆಳಗ್ಗೆ ಎದ್ದರೆ ಭ್ರಷ್ಟಾಚಾರ, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿದೆ. ಈಗಾಗಲೇ ನಮ್ಮ ಮೇಲೆ ತನಿಖೆಗೆ ಸಾಕಷ್ಟು ಆಯೋಗಗಳು, ಎಸ್ಐಟಿಗಳು ಎಲ್ಲಾ ಆಗಿವೆ. ಮತ್ತೆ ಮತ್ತೆ ಮರು ಪ್ರಯತ್ನ ಮಾಡುವ ಬದಲು ನಿಮ್ಮಲ್ಲಿ ಭ್ರಷ್ಟಾಚಾರವನ್ನು ಸರಿಪಡಿಸಬೇಕು ಎಂದು ಕ್ರಮ ವಹಿಸಿ ಎಂದು ಕಿಡಿಕಾರಿದ್ದಾರೆ.