ಸುನೀಲ್ ಪುರಾಣಿಕ್ ಅವರಿಂದ ತೆರುವಾಗಿದ್ದ ಸ್ಥಾನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ನೇಮಕಗೊಂಡಿದ್ದಾರೆ. ಸೋಮವಾರ(ನವೆಂಬರ್ 7)ರಂದು ಅಶೋಕ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸೋಮವಾರ ಅಶೋಕ್ ಕಶ್ಯಪ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್, ಲಿಫ್ಟ್ ಕೊಡ್ಲಾ, ಧ್ವಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಶೋಕ್ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ತಲೆದಂಡ ಸಿನಿಮಾಗೆ ಅಶೋಕ್ ಕಶ್ಯಪ್ ಅವರೇ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.
ಜಗ್ಗೇಶ್, ಉಪೇಂದ್ರ, ಪ್ರಿಯಾಮಣಿ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ ಹೆಗ್ಗಳಿಕೆ ಅಶೋಕ್ ಅವರದ್ದು. ಅಲ್ಲದೇ ಅನೇಕ ಧಾರಾವಾಹಿಗಳಿಗೆ ಕೆಲಸ ಕೂಡ ಮಾಡಿದ್ದಾರೆ. ಇವರದ್ದೇ ನಿರ್ಮಾಣ ಸಂಸ್ಥೆಯಿAದ ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಸಿನಿಮಾಟೋಗ್ರಾಫರ್, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ
ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಸಿನಿಮಾಟೋಗ್ರಾಫರ್ಗಳಲ್ಲಿ ಅಶೋಕ್ ಕಶ್ಯಪ್ ಒಬ್ಬರಾಗಿದ್ದಾರೆ. ಇನ್ನೂ ಹಿರಿಯ ನಿರ್ದೇಶಕ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಛಾಯಾಗ್ರಾಹಕ ಬಸವರಾಜ್, ಹೀಗೆ ಹಲವು ಗಣ್ಯರು ಈ ವೇಳೆ ಹಾಜರಿದ್ದು, ಅಶೋಕ್ ಅವರ ಹೊಸ ಹೆಜ್ಜೆಗೆ ಶುಭ ಕೋರಿದರು.