ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಯ್ಕೆಯಾಗುವ ಸಾಧ್ಯತೆಗಳಿದೆ. ಇಂದು CWC ಸಭೆ ನಡೆಯಲಿದ್ದು, ಸಭೆಯ ಬಳಿಕ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಗಳಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಘೋಷಣೆ ಮಾಡಿದಂತೆ ಆಗಸ್ಟ್ 22ರಿಂದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಬೇಕಿತ್ತು. ರಾಹುಲ್ ಗಾಂಧಿ ಅವರಿಗೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ಕೆಲವು ಹಿರಿಯ ನಾಯಕರು ಮನವಿ ಮಾಡಿದ್ದರು. ಆದರೆ ರಾಹುಲ್ ಗಾಂಧಿ ನಿರಾಕರಿಸಿದ ಹಿನ್ನಲೆ ಚುನಾವಣೆ ಘೋಷಣೆ ವಿಳಂಬವಾಗಿದೆ.
ರಾಹುಲ್ ಗಾಂಧಿ ನಿರಾಕರಣೆ ಹಿನ್ನಲೆ ಪಕ್ಷದಲ್ಲಿ ಹಿರಿಯರಾಗಿರುವ ಹಾಗೂ ಸಿಎಂ ಸ್ಥಾನದಲ್ಲಿರುವ ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಚಿಂತನೆಗಳು ನಡೆದಿವೆ. ಈ ಸಂಬಂಧ ಸೋನಿಯಾಗಾಂಧಿ ಕೂಡಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವೈದ್ಯಕೀಯ ತಪಾಸಣೆಗೆ ವಿದೇಶಕ್ಕೆ ಸೋನಿಯಾ – ಸಾಥ್ ನೀಡಲಿದ್ದಾರೆ ರಾಹುಲ್, ಪ್ರಿಯಾಂಕಾ
ಅಶೋಕ್ ಗೆಹ್ಲೋಟ್ಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಸಿಎಂ ಸ್ಥಾನ ಖಾಲಿಯಾಗಲಿದ್ದು, ಈ ಜಾಗಕ್ಕೆ ಸಚಿನ್ ಪೈಲಟ್ ಅವರನ್ನು ಆಯ್ಕೆ ಮಾಡಿದ್ದಲ್ಲಿ ರಾಜಸ್ಥಾನ ರಾಜಕೀಯದಲ್ಲಿರುವ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಕಿಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾ ಸೋನಿ ಅವರ ಹೆಸರು ಕೇಳಿ ಬಂದಿದೆ. ಸೋನಿಯಾಗಾಂಧಿ ಅತ್ಯಾಪ್ತೆ ಹಾಗೂ ಹಿರಿಯ ನಾಯಕಿಯಾಗಿರುವುದರಿಂದ ಅವರ ಹೆಸರು ರೇಸ್ ನಲ್ಲಿ ಕೇಳಿ ಬಂದಿದೆ. ಆದರೆ ಅವರಿಗೆ ವಯಸ್ಸು, ಅನಾರೋಗ್ಯದ ಕಾರಣ ಅವರು ಈ ಆಫರ್ ಒಪ್ಪಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಈ ಹಿನ್ನಲೆ ಬಹುತೇಕ ಅಶೋಕ್ ಗೆಹ್ಲೋಟ್ಗೆ ಮಣೆ ಹಾಕಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.