ಮುಂಬೈ: ಸಂಗೀತ ಲೋಕದ ದಿಗ್ಗಜ ಹಾಗೂ ಐಕಾನಿಕ್ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಂತ್ಯಕ್ರಿಯೆ ಮುಂಬೈನ (Mumbai) ಶಿವಾಜಿ ಪಾರ್ಕ್ನಲ್ಲಿ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಆಶಾ ಭೋಸ್ಲೆ ಪುತ್ರ ಆನಂದ್ ಭೋಸ್ಲೆ, ಸಹೋದರ-ಸಹೋದರಿ ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಸೇರಿದಂತೆ ಕುಟುಂಬದ ಸದಸ್ಯರು ಅಂತಿಮ ವಿಧಿಗಳ ವೇಳೆ ಹಾಜರಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯದ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಅವರ ಪತ್ನಿ ಗಾಯಕಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ತನಿಖೆ – ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ತ್ರಿವರ್ಣ ಧ್ವಜದಲ್ಲಿ ಮಡಚಲಾದ ಅವರ ಪಾರ್ಥಿವ ದೇಹವನ್ನು ನಿವಾಸದಿಂದ ಶಿವಾಜಿ ಪಾರ್ಕ್ ದಹನಸ್ಥಳದವರೆಗೆ ಕೊಂಡೊಯ್ಯುವಾಗ, ಮುಂಬೈನ ಬೀದಿಗಳಲ್ಲಿ ಜನಸಾಗರ ಅಂತಿಮ ದರ್ಶನಕ್ಕಾಗಿ ಜಮಾಯಿಸಿತು. ಭಾರತದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರಾದ ಆಶಾ ಭೋಸ್ಲೆ ಅವರಿಗೆ ಗೌರವ ಸಲ್ಲಿಸಲು ಅಭಿಮಾನಿಗಳು, ಶ್ರೋತೃಗಳು, ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದ ಗಣ್ಯರು ಒಟ್ಟುಗೂಡಿದಂತೆ, ನಗರದೆಲ್ಲೆಡೆ ಭಾವನಾತ್ಮಕ ವಾತಾವರಣ ಆವರಿಸಿತ್ತು. ಇದನ್ನೂ ಓದಿ: ಭಾರತೀಯ ಟ್ಯಾಂಕರ್ಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ: ಇರಾನ್ ಸ್ಪಷ್ಟನೆ
ಇನ್ನು ಆಶಾ ಅಂತಿಮ ದರ್ಶನಕ್ಕೆ ಬಾಲಿವುಡ್ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು. ನಟಿ ಟಬು, ಎಆರ್ ರೆಹಮಾನ್, ನಟ ಅಮಿರ್ ಖಾನ್, ಗಾಯಕಿ ಉಷಾ ಉತ್ತಪ್ಪ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ಹಾಗೂ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಆಶಾ ಭೋಸ್ಲೆಯವರ ಅಂತಿಮ ದರ್ಶನ ಪಡೆದರು. ಆಶಾ ಭೋಸ್ಲೆ ಅವರ ಮುದ್ದಿನ ಮೊಮ್ಮಗಳು ಜಾನಿಯಾ ಭೋಸ್ಲೆ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಶಾಜೀ ಅಂತಿಮ ದರ್ಶನಕ್ಕೆ ಬಂದ ನಟಿ ಟಬು, ಜಾನಿಯಾಳನ್ನು ಅಪ್ಪಿ ಸಂತೈಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಆಶಾ ಭೋಸ್ಲೆಯವರಿಗೆ ಅಂತಿಮ ವಿದಾಯ ಹೇಳಲಾಯಿತು. ಇದನ್ನೂ ಓದಿ: ಗಾಂಜಾ ಸೇವಿಸಿ ವಿಚಿತ್ರ ವರ್ತನೆ – ವಿದ್ಯಾರ್ಥಿ ವಿರುದ್ಧ ಸುಮೊಟೊ ಕೇಸ್ ದಾಖಲು

