ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದ್ದು, ಅಗತ್ಯ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಆರೋಪಿಸಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಈ ಚುನಾವಣೆಯಲ್ಲಿ ಆಪ್ನ (AAP) ತನ್ನ ರಾಜಕೀಯ ಪ್ರತಿಸ್ಪರ್ಧಿಯನ್ನು ಇರದಂತೆ ನೋಡಿಕೊಳ್ಳುತ್ತಿದೆ. ಅವರನ್ನು ಉಗ್ರನಂತೆ ಬಂಧಿಸಲಾಗಿದೆ. ಅವರು ಮಾಡಿದ ತಪ್ಪೇನು ಎಂದು ಮಾನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ
ಜೈಲಿನ ಒಳಗಿನ ಗಾಜಿನ ಕೋಣೆಯಲ್ಲಿ ಕೇಜ್ರಿವಾಲ್ ಅವರನ್ನು ಮಾನ್ ಭೇಟಿಯಾದರು. ಬಳಿಕ ಇಬ್ಬರು ವಿರೋಧ ಪಕ್ಷದ ನಾಯಕರು ದೂರವಾಣಿ ಸಂಪರ್ಕದ ಮೂಲಕ 30 ನಿಮಿಷಗಳ ಕಾಲ ಮಾತನಾಡಿದರು. ಅವರನ್ನು ನೋಡಿ ನಾನು ಭಾವುಕನಾದೆ ಎಂದು ಮಾನ್ ಹೇಳಿದ್ದಾರೆ.
ಜೈಲಿನೊಳಗೂ ಕೇಜ್ರಿವಾಲ್ ದೆಹಲಿಯ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಮುಂದಿನ ವಾರ ಇಬ್ಬರು ಸಚಿವರನ್ನು ತಿಹಾರ್ ಜೈಲಿಗೆ ಕರೆಸಿಕೊಂಡು ಆಡಳಿತದ ಕುರಿತು ಚರ್ಚಿಸಲು ಕೇಜ್ರಿವಾಲ್ ಯೋಜಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭೇಟಿಯ ಬಳಿಕ ಮಾನ್ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿಯ ರಾಜಕೀಯ ತಂಡ – ಇಡಿ, ಕೇಜ್ರಿವಾಲ್ ಅವರ ಚಿಂತನೆಯನ್ನು ಬಂಧಿಸಲು ಸಾಧ್ಯವಿಲ್ಲ. ಎಎಪಿ ಮಾತ್ರ ಬಿಜೆಪಿಯನ್ನು ತಡೆಯಬಹುದು ಎಂದು ಬರೆದುಕೊಂಡಿದ್ದಾರೆ.
ಮದ್ಯ ನೀತಿ ಹಗರಣಕ್ಕೆ (Liquor policy scam) ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿಯನ್ನು ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಬಂಧಿಸಿದೆ. ಒಂದು ವಾರಕ್ಕೂ ಹೆಚ್ಚು ಕಾಲ ಇಡಿ ತನ್ನ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ ನಂತರ ಜೈಲಿಗೆ ಕಳುಹಿಸಲಾಯಿತು. ಅವರ ಬಂಧನವನ್ನು ಏಪ್ರಿಲ್ 23ಕ್ಕೆ ವಿಸ್ತರಿಸಲಾಗಿದೆ. ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏ.29ಕ್ಕೆ ಮುಂದೂಡಿದೆ. ಇದನ್ನೂ ಓದಿ: ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್ ಅವಕಾಶ