ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ದೆಹಲಿ ಮದ್ಯ ನೀತಿ ಹಗರಣದ ಕಿಂಗ್ಪಿನ್. ಅವರ ಭ್ರಷ್ಟಾಚಾರದ ಹುನ್ನಾರಗಳು ಬಯಲಾಗುತ್ತಿದ್ದು, ಅವರಿಗೆ ಕೈಕೊಳ ಹತ್ತಿರವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿಕೆ ನೀಡಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌರವ್ ಭಾಟಿಯಾ, ಜನರು ಕೋವಿಡ್-19 ನಿಂದ ಬಳಲಿ, ಸಹಾಯಕ್ಕಾಗಿ ಹಾತೊರೆಯುತ್ತಿದ್ದಾಗ ಕೇಜ್ರಿವಾಲ್ ಅವರು ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಅಬಕಾರಿ ನೀತಿ ಹಗರಣದ ಬೇರುಗಳು ಭ್ರಷ್ಟ ಕೇಜ್ರಿವಾಲ್ ಮನೆ ಬಾಗಿಲಿನಲ್ಲಿದೆ. ಕಾನೂನಿಗಿಂತ ಯಾರೂ ಕೂಡಾ ಮೇಲಲ್ಲ, ಯಾವುದೇ ಭ್ರಷ್ಟರನ್ನೂ ಸುಮ್ಮನೆ ಬಿಡಲಾಗುವುದಿಲ್ಲ ಎಂದು ಟಾಂಗ್ ನೀಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ವಕ್ತಾರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ಚುನಾವಣೆಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಸಾರ್ವಜನಿಕರೇ ಎಎಪಿಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: Liquor Policy Scam – ಸಿಸೋಡಿಯಾ ಮೇಲೆ ಸಿಬಿಐ ದಾಳಿ ಮಾಡಿದ್ದು ಯಾಕೆ?
ಏನಿದು ಮದ್ಯ ಹಗರಣ?
ಪ್ರಕರಣದ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಹಾಗೂ ಇತರರು 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅನುಮೋದನೆಯಿಲ್ಲದೇ ಪರವಾನಗಿದಾರರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಬಿಐನ ಎಫ್ಐಆರ್ ದಾಖಲಾಗಿದೆ.
ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿ, ಇಂಡೋಸ್ಪಿರಿಟ್ ಮಾಲೀಕ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಆಪ್ತ, ಸಹಚರರಿಗೆ 2 ಕೋಟಿ ರೂ. ಪಾವತಿ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅಜಾದ್ ಬೆನ್ನಲ್ಲೇ ಕಾಂಗ್ರೆಸ್ನ ಮಹತ್ವದ ಹುದ್ದೆಗೆ ಆನಂದ್ ಶರ್ಮಾ ರಾಜೀನಾಮೆ