ಶ್ರೀನಗರ: 2 ವಾರಗಳ ಹಿಂದೆ ಭಾರತದ ಗಡಿ ಪ್ರವೇಶಕ್ಕೆ ಯತ್ನಿಸಿ, ಬಂಧಿತನಾಗಿದ್ದ ಭಯೋತ್ಪಾದಕ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಗುಂಡು ತಗುಲಿಸಿಕೊಂಡು ಬಂಧಿತನಾಗಿದ್ದ ಭಯೋತ್ಪಾದಕ ತಬ್ರಕ್ ಹುಸೇನ್ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನಿಗೆ ಪಾಕಿಸ್ತಾನಿ ಸೇನೆ ಇಲ್ಲಿ ಆತ್ಮಾಹುತಿ ಕಾರ್ಯಾಚರಣೆ ನಡೆಸಲು 30,000 ರೂ. ನೀಡಿದ್ದಾಗಿಯೂ, ತನ್ನೊಂದಿಗೆ 4-5 ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದ್ದಾಗಿಯೂ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಇದನ್ನೂ ಓದಿ: ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ
ಪಾಕ್ ಆಕ್ರಮಿತ ಕಾಶ್ಮೀರದ ಸಬ್ಜ್ಕೋಟ್ ಗ್ರಾಮದ ನಿವಾಸಿ ಹುಸೇನೆ ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಒಪ್ಪಿಕೊಂಡಿದ್ದ. ಆತ ಕಳೆದ ತಿಂಗಳು ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ನಲ್ಲಿ ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವೇಳೆ ಗುಂಡಿನ ದಾಳಿಗೆ ಗಾಯಗೊಂಡಿದ್ದ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತನ್ನನ್ನು ಪಾಕ್ ಸೇನೆ ಕಳುಹಿಸಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಯೋತ್ಪಾದಕ ಹಲವು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟು ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.