ಚಿತ್ರದುರ್ಗ: ಸರ್ಕಾರಿ ಐಬಿಯಲ್ಲಿ ಇಸ್ಪಿಟ್ (Ispit) ಆಡುತ್ತಿದ್ದ ನಗರಸಭೆ ಸದಸ್ಯ ಸೇರಿದಂತೆ 14 ಜನರನ್ನು ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ (Chitaradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಬಳಿಯ ಐಬಿಯನ್ನೇ ಜೂಜು ಅಡ್ಡೆಯಾಗಿಸಿಕೊಂಡಿದ್ದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ಬೆಂಬಲಿಗರು ಹಾಗೂ ನಗರಸಭೆ ಸದಸ್ಯರಾದ ಜಗದೀಶ್, ಅಜಯ್ ಕುಮಾರ್ ಮತ್ತು ಅನಿಲ್ ಕುಮಾರ್ ನೇತೃತ್ವದಲ್ಲಿ ಇಸ್ಪಿಟ್ ಆಡುತ್ತಿದ್ದರು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದರು.
ಈ ವೇಳೆ ಬಂಧಿತರಿಂದ 4 ಲಕ್ಷದ 37 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಹಿರಿಯೂರು ನಗರಸಭೆ ಸದಸ್ಯ ಜಗದೀಶ್ ಸೇರಿದಂತೆ 14 ಜನರನ್ನು ಬಂಧಿಸಿದ್ದು, ಮತ್ತಿಬ್ಬರು ನಗರಸಭೆ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಅಜ್ಜಪ್ಪ ಪರಾರಿಯಾಗಿದ್ದಾರೆ. ಹೀಗಾಗಿ ಮೂವರು ನಗರಸಭೆ ಸದಸ್ಯರು ಹಾಗೂ ಐಬಿ ಮೇಟಿ ನಾಸಿರ್ ಸೇರಿದಂತೆ ಹಲವರ ವಿರುದ್ಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು, ಕೇರಳ ಮೇಲ್ಮೈ ಸುಳಿಗಾಳಿ ಎಫೆಕ್ಟ್- ಬೆಂಗಳೂರು ಇನ್ನೂ 2 ದಿನ ಕೂಲ್ ಕೂಲ್
ಇನ್ನು ಪ್ರವಾಸಕ್ಕೆ ಬರುವ ಪ್ರವಾಸಿಗರು ತಂಗಲು ಒಂದು ರೂಂ ಕೊಡಲು ಮೀನಾಮೇಷ ಎಣಿಸುವ ಪಿಡಬ್ಲುಡಿ ಇಲಾಖೆ ಅಧಿಕಾರಿಗಳು, ಉಸ್ತುವಾರಿ ಸಚಿವ ಸುಧಾಕರ್ ಅವರ ಬೆಂಬಲಿಗರಿಗೆ ಇಸ್ಪಿಟ್ ಆಡಲು ಐಬಿ ನೀಡಿರೋದು ವಿಪರ್ಯಾಸ ಎನಿಸಿದ್ದು, ರೆಡ್ ಹ್ಯಾಂಡಾಗಿ ಜೂಜುಕೋರರನ್ನು ಬಂಧಿಸಿರುವ ಹಿರಿಯೂರು ಠಾಣೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದಂಧೆಯಲ್ಲಿ ಸಿಲುಕಿರುವ ನಗರಸಭೆ ಸದಸ್ಯರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ನಗರದ ಅಭಿವೃದ್ಧಿಯತ್ತ ಯೋಚಿಸದ ಜೂಜುಕೋರರನ್ನು ನಗರಸಭೆ ಸದಸ್ಯನನ್ನಾಗಿಸಿ ತಪ್ಪು ಮಾಡಿದೆವು ಅಂತ ಪಶ್ಚಾತಾಪ ಪಟ್ಟಿರುವ ಜನಸಾಮಾನ್ಯರು ಇವರ ಮಹತ್ಕಾರ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟ ರವಿಕಿರಣ್ಗೆ ಲಕ್ಷ ಲಕ್ಷ ದೋಖಾ