ಅಂದುಕೊಂಡಂತೆ ಆಗಿದ್ದರೆ, ಕೋರ್ಟ್ ಆದೇಶದಂತೆ ನಟಿ ಜಯಪ್ರದಾ ಅವರನ್ನು ಜನವರಿ 10ರೊಳಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ, ಪೊಲೀಸರ ಕೈಗೆ ಸಿಗದಂತೆ ಜಯಪ್ರದಾ ತಪ್ಪಿಸಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಮಧ್ಯ ಪ್ರದೇಶದ ಹೈಕೋರ್ಟ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಫೆಬ್ರವರಿ 27ರಂದು ಬಂಧಿಸಿ ಕೋರ್ಟಿಗೆ ಹಾಜರು ಪಡಿಸುವಂತೆ ಸೂಚಿಸಿದೆ.
ಏನಿದು ಪ್ರಕರಣ?
ಥಿಯೇಟರ್ ಕಾಂಪ್ಲೆಕ್ಸ್ ನ ನೌಕರರ ರಾಜ್ಯ ವಿಮೆ (ಇಎಸ್.ಐ) ನಿಧಿಯ ಪಾಲನ್ನು ಪಾವತಿಸದೇ ಇರುವುದಕ್ಕಾಗಿ ನ್ಯಾಯಾಲಯವು ನಟಿ ಜಯಪ್ರಯಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ (Punishment)ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ನಟಿ ಜಯಪ್ರದಾ ಅವರು ಹೈಕೋರ್ಟ್ (High Court) ಗೆ ಮೊರೆ ಹೋಗಿದ್ದರು. ಮಾನ್ಯ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಸಹಜವಾಗಿಯೇ ನಟಿಗೆ ಶಾಕ್ ಆಗಿದೆ.
ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿತ್ತು. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿತ್ತು.
ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.
ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು. ಹಾಗಾಗಿ ಶಿಕ್ಷೆ ನೀಡಲಾಗಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.