ಲಕ್ನೋ: ಶಾಲೆಗೆ ತೆರಳಲು ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಮಥುರಾ ಜಿಲ್ಲೆಯ ಮರ್ಹಾಲ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ.
8ನೇ ತರಗತಿಯ ವಿದ್ಯಾರ್ಥಿನಿ ಭಾವನಾ ಗ್ರಾಮದಲ್ಲಿ ಸುರಿಯುತ್ತಿರು ಮಳೆಯಿಂದಾಗಿ ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದೆ. ಹೀಗಾಗಿ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಸರಿಯಾದ ರಸ್ತೆಯಾಗುವವರೆಗೆ, ಶಾಲೆಗೆ ಹೋಗಲು ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಸಾಧ್ಯವಾಗುವುದಾದರೆ, ಶಾಲೆಗೆ ತೆರಳಲು ಹೆಲಿಕಾಪ್ಟರ್ ನ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾಳೆ.
ಮುಖ್ಯಮಂತ್ರಿಗಳೇ ನೀವು `ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದೀರಿ. ಈ ಯೋಜನೆಗಾಗಿ ರಾಜ್ಯಾದ್ಯಂತ ಸಾಕಷ್ಟು ಪ್ರಚಾರವನ್ನೂ ಮಾಡಿದ್ದೀರಿ. ಆದರೆ ಮಥುರಾದ ಜಿಲ್ಲೆಯ ಹೆಚ್ಚಿನ ಬಾಲಕಿಯರು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಅಲ್ಲದೇ ಗ್ರಾಮಸ್ಥರು ಸಹ ವಿದ್ಯಾರ್ಥಿನಿಯ ಬೇಡಿಕೆಗಳಿಗೆ ಕೈಜೋಡಿಸಿದ್ದು, ಖುದ್ದು ಮುಖ್ಯಮಂತ್ರಿಗಳ ಇತ್ತ ಗಮನ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮರ್ಹಾಲ ಗ್ರಾಮದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪಕ್ಕದ ಹಸ್ನಾಪುರ ಗ್ರಾಮಕ್ಕೆ ತೆರಳಬೇಕು, ಆದರೆ ರಸ್ತೆ ತುಂಬ ಹಾಳಾಗಿದ್ದು, ಮಳೆಗಾಲದಲ್ಲಿ ಮಕ್ಕಳು ನರಕಯಾತನೆ ಅನುಭವಿಸುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.