ಜೈಪುರ: ಮದುವೆಯಾದ 16 ದಿನದಲ್ಲೇ ರಾಜಸ್ಥಾನ ಮೂಲದ ಯೋಧರೊಬ್ಬರು ಬಾಂಬ್ ಬ್ಲಾಸ್ಟ್ ನಲ್ಲಿ ಹುತಾತ್ಮರಾದ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ.
ಸೌರಬ್ ಕಠಾರಾ ಹುತಾತ್ಮರಾದ ಯೋಧ. ಸೌರಬ್ 16 ದಿನದ ಹಿಂದೆ ಅಂದರೆ ಡಿಸೆಂಬರ್ 8ರಂದು ಪೂನಂ ಅವರನ್ನು ಮದುವೆಯಾಗಿದ್ದರು. ಸೌರಬ್ ಹುತಾತ್ಮರಾದ ವಿಷಯ ತಿಳಿದ ಪೂನಂ ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಸೌರಬ್ ಅವರ ಪಾರ್ಥಿವ ಶರೀರ ಇಂದು ಸಂಜೆ ಅವರ ಗ್ರಾಮಕ್ಕೆ ತಲುಪಲಿದೆ.
ಮಾಹಿತಿಗಳ ಪ್ರಕಾರ ಇಂದು ಸೌರಬ್ ಅವರ ಹುಟ್ಟುಹಬ್ಬ. ಸೌರಬ್ ಹಾಗೂ ಅವರ ಸಹೋದರ ಅಕ್ಕ-ತಂಗಿಯನ್ನು ಡಿಸೆಂಬರ್ 8ರಂದು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸೌರಬ್ ತನ್ನ 5 ದಿನದ ರಜೆಯನ್ನು ಮುಗಿಸಿ ಕೆಲಸಕ್ಕೆ ಹಾಜರಾಗಲು ಕುಪ್ವಾರಾಕ್ಕೆ ತೆರಳಿದ್ದರು. ಅಲ್ಲಿ ಅವರು ಬಾಂಬ್ ಸ್ಫೋಟಕ್ಕೆ ಹುತಾತ್ಮರಾಗಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರಿನಲ್ಲಿ, ಭರತಪುರದ ಕೆಚ್ಚೆದೆಯ ಸೈನಿಕರಿಗೆ ನನ್ನ ಸಲಾಂ. ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಸೌರಬ್ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಈ ಸಮಯದಲ್ಲಿ ನಾವು ಸೌರಬ್ ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತೇವೆ. ದೇವರು ಅವರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.