ಚಾಮರಾಜನಗರ: ಯೋಧ ಗ್ರಾಮ ಎಂದೇ ಕರೆಯಿಸಿಕೊಳ್ಳುವ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಸೇನಾ ದಿನ ಆಚರಿಸಲಾಯಿತು. ಈ ವೇಳೆ ಮಾಜಿ, ಹಾಲಿ ಸೈನಿಕರನ್ನು ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು.
ಮಾಜಿ ಸೈನಿಕರು, ರಜೆ ಮೇಲೆ ಬಂದಿರುವ ಯೋಧರನ್ನು ಶಾಲಾ ಮಕ್ಕಳ ಬ್ಯಾಂಡ್ ಟ್ರೂಪ್ನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಕ್ಕಳು, ಗ್ರಾಮಸ್ಥರು ಭಾರತ ಮಾತೆಗೆ ಜೈಕಾರ ಹಾಕುತ್ತಾ ದೇಶಭಕ್ತಿ ಪಸರಿಸಿದರು.
ಸೇನಾ ದಿನ ಆಚರಣೆ ಹಿನ್ನೆಲೆ ಚರ್ಚ್ ಪಾದ್ರಿ ಕ್ರಿಸ್ಟೋಫರ್ ಸಗಾಯ್ ರಾಜ್ ನೇತೃತ್ವದಲ್ಲಿ ಗ್ರಾಮಸ್ಥರು ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಿದರು. ಸಂತ ಮೇರಿ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಗ್ರಾಮದಲ್ಲಿ 114 ಮಂದಿ ಯೋಧರಿದ್ದು, ಕಾರ್ಗಿಲ್ ಸಮರದಲ್ಲಿ ಗ್ರಾಮದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಅಸುನೀಗಿದ ಸೈನಿಕರ ಪತ್ನಿಯರೂ ಗ್ರಾಮದಲ್ಲಿದ್ದಾರೆ.