ಬೆಂಗಳೂರು: ಕಾಶ್ಮೀರದ (Jammu and Kashmir) ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟದ ವೇಳೆ ಹುತಾತ್ಮರಾಗಿದ್ದ ಕ್ಯಾಪ್ಟನ್ ಪ್ರಾಂಜಲ್ (Pranjal) ಅವರ ಅಂತಿಮ ಸಂಸ್ಕಾರ ಕೂಡ್ಲುಗೇಟ್ನ ಸೋಮಸುಂದರ್ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಿತು.
ಸ್ವಗೃಹ ನಂದನವನ ಬಡಾವಣೆಯಿಂದ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ವಾಹನದಲ್ಲಿ 23 ಕಿ.ಮೀ ಮೆರವಣಿಗೆಯ ಮೂಲಕ ಚಿತಗಾರಕ್ಕೆ ತರಲಾಯಿತು. ಅಂತಿಮ ಯಾತ್ರೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ಭಾಗಿಯಾದ್ದರು. ದೇಶಕ್ಕಾಗಿ ಮಡಿದ ಯೋಧನಿಗೆ ಶಾಲಾ ಮಕ್ಕಳು, ಸಾರ್ವಜನಿಕರು ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಜಿಗಣಿ, ಬನ್ನೇರುಘಟ್ಟ ಮುಖ್ಯರಸ್ತೆ ಸೇರಿ ಹಲವು ಸರ್ಕಲ್ ಗಳಲ್ಲಿ ಹೂ ಎರಚಿ ಅಂತಿಮ ನಮನ ಸಲ್ಲಿಸಿದ್ದಾರೆ.
ಹುತಾತ್ಮ ಯೋಧನ (Soldier) ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ದಾರಿಯುದ್ದಕ್ಕೂ ಯೋಧನಿಗೆ ಜೈಕಾರ ಹಾಕಿದ್ದಾರೆ. ಅಲ್ಲದೇ ಭಾರತ ಮಾತಾಕೀ ಜೈ ಎಂಬ ಘೋಷಣೆಗಳು ಮುಳುಗಿವೆ. ರಸ್ತೆಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಅಗಲಿದ ಯೋಧನಿಗೆ ಗೌರವ ಸೂಚಿಸಿದ್ದಾರೆ. ಇದನ್ನೂ ಓದಿ: ವೀರಯೋಧ ಕ್ಯಾ.ಪ್ರಾಂಜಲ್ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್
ಯೋಧನ ಪಾರ್ಥಿವ ಶರೀರವನ್ನು ಜಿಗಣಿಯ ನಂದನವನ ಬಡಾವಣೆಯ ಯೋಧನ ಸ್ವಗೃಹದ ಮುಂಭಾಗ ಇಂದು ಬೆಳಗ್ಗೆ 7 ಗಂಟೆಯಿಂದ ಬೆ.9:30 ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 9:45 ರಿಂದ 10:15ರ ವರೆಗೆ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಸೇನೆ ಹಾಗೂ ಸ್ಥಳೀಯ ಪೊಲೀಸ್ ಪಡೆಗಳಿಂದ ಗಾಢ್ ಆಫ್ ಆನರ್ ನೆರವೇರಿತು. ಬಳಿಕ ಕುಟುಂಬಸ್ಥರು ಬ್ರಾಹ್ಮಣ ಸಂಪ್ರದಾಯದಂತೆ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಬಳಿಕ ಯೋಧನ ಪಾರ್ಥಿವ ಶರೀರವನ್ನು ನಂದನವನ ಬಡಾವಣೆಯಿಂದ ಜಿಗಣಿಯ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್ ರೋಡ್ ಸಂಪರ್ಕ, ಕೋನಪ್ಪನ ಅಗ್ರಹಾರ ವೃತ್ತ, ಕೂಡ್ಲು ಗೇಟ್ ಮಾರ್ಗವಾಗಿ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ತರಲಾಯಿತು. ಒಟ್ಟು 23 ಕಿ.ಮೀ ಸಾಗಿದ ಅಂತಿಮ ಯಾತ್ರೆಯಲ್ಲಿ ರಸ್ತೆಯಲ್ಲಿ ಕಿಕ್ಕಿರಿದು ಸೇರಿದ್ದ ಜನ ಹುತಾತ್ಮ ಯೋಧನಿಗೆ ಜೈಕಾರ ಹಾಕಿದ್ದಾರೆ.
ಬುಧವಾರ ಹಾಗೂ ಗುರುವಾರದ ನಡುವೆ ರಜೌರಿಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಸಾವಿಗೀಡಾಗಿದ್ದರು. ಇದರಲ್ಲಿ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಕೂಡ ಒಬ್ಬರು. ಅವರ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯ ನಿವಾಸಕ್ಕೆ ತರಲಾಗಿತ್ತು.
ಜಮ್ಮು ಕಾಶ್ಮೀರದಿಂದ ಬೆಳಗ್ಗೆ 11:30ಕ್ಕೆ ವಿಶೇಷ ಸೇನೆಯ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಜಮ್ಮು ಕಾಶ್ಮೀರದಿಂದ ದೆಹಲಿಗೆ ತರಲಾಗಿತ್ತು. ಬಳಿಕ ದೆಹಲಿಯಿಂದ ಬೆಂಗಳೂರಿನ ಎಚ್ಎಎಲ್ಗೆ ತರಲಾಯಿತು. ಶುಕ್ರವಾರ ಸಂಜೆ 7 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಯೋಧನ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಬಂದಿಳಿಯಿತು. ಎಚ್ಎಎಲ್ ನಿಂದ ರಸ್ತೆ ಮಾರ್ಗವಾಗಿ ಅಂಬುಲೆನ್ಸ್ ಮೂಲಕ ಜಿಗಣಿಗೆ ಪಾರ್ಥಿವ ಶರೀರವನ್ನು ಸಾಗಿಸಲಾಗಿತ್ತು.
ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಜೆ ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ನಾಯಕ ಆರ್. ಅಶೋಕ್ ಮುಂತಾದ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.
ಅಂತಿಮ ನಮನದ ಬಳಿಕ ಸಿದ್ದರಾಮಯ್ಯ ಮಾತನಾಡಿ, ಸಾರ್ವಜನಿಕರ ರಕ್ಷಣೆಗಾಗಿ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಅವರ ಈ ಅಗಲುವಿಕೆ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನಿಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದ ವತಿಯಿಂದ 50 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ತಂದೆ ಪ್ರತಿಷ್ಠಿತ ಕಂಪನಿ ಎಂಡಿ.. ದೊಡ್ಡ ಕುಟುಂಬದವರಾದ್ರೂ ಸೇನೆ ಸೇರಿದ್ರು ಪ್ರಾಂಜಲ್: ತರಬೇತುದಾರರ ಮನದಾಳ