ದಾವಣಗೆರೆ: ಹರಿಹರದ ಕೋಮರನಹಳ್ಳ ಗುಡ್ಡದಲ್ಲಿ ಮುಸಲ್ಮಾನರು ಝಂಡಾ ಕಟ್ಟೆ ಮಾಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P. Renukacharya) ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿವಾದದ (Waqf Board row) ವಿಚಾರವಾಗಿ ಪ್ರತಿಕ್ರಿಯಿಸಿದರು. ಗುಡ್ಡದ ಅರಣ್ಯ ಪ್ರದೇಶದಲ್ಲಿ ಇವರು ಹೀಗೆ ಒತ್ತುವರಿ ಮಾಡಿಕೊಂಡರೆ ಇಲಾಖೆಯವರು ಸುಮ್ನೆ ಇರ್ತಾರೆ. ಆದರೆ ರೈತರ ಮೇಲೆ ಮಾತ್ರ ದಬ್ಬಾಳಿಕೆ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ಬೋರ್ಡ್ ದೇಶಕ್ಕೆ ಮಾರಕವಾದ ಮಂಡಳಿಯಾಗಿದೆ. ಕಾಂಗ್ರೆಸ್ನ ಕೆಲ ನಾಯಕರು ಸದ್ದಿಲ್ಲದೆ ಭೂಮಿಯನ್ನು ವಕ್ಫ್ಗೆ ನೀಡಿದ್ದಾರೆ. ಯಾವಾಗ ಜನಾಕ್ರೋಶ ಆರಂಭವಾಯ್ತೋ ಆಗ ರಾಜ್ಯ ಸರ್ಕಾರ ಯು-ಟರ್ನ್ ಹೊಡೆದಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ನೋಟಿಸ್ ವಾಪಸ್ಸು ಪಡೆದಿದ್ದೇವೆ ಎಂದು ಹೇಳಿದ್ದಾರೆ. ಅದರ ಜೊತೆ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ಕೂಡ ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ನೋಟಿಸ್ ನೀಡಿದ್ದೇವೆ ಎಂದು ಜಮೀರ್ ಹೇಳಿದ್ದಾರೆ. ಜಮೀರ್ ಒಬ್ಬ ಮತಾಂದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಕಾರಣವಾದವರು. ನಾನೇ ಸೂಪರ್ ಸಿಎಂ ಎಂದು ಮೆರೆಯುತ್ತಿದ್ದಾನೆ. ಇದು ಸರಿಯಲ್ಲ, ನಿನ್ನನ್ನು ನಿಮ್ಮ ಸರ್ಕಾರವನ್ನು ಮನೆಗೆ ಕಳುಹಿಸುವ ಕೆಲಸ ರಾಜ್ಯದ ಜನರು ಮಾಡ್ತಾರೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.
ಮಠಾಧೀಶರು ಈಗ ಬೀದಿಗೆ ಇಳಿದು ಪ್ರತಿಭಟನೆ ಮಾಡುಲು ಮುಂದಾಗಬೇಕಿದೆ. ರಾಜ್ಯದಲ್ಲಿ ಹಲವು ಮಠಗಳು, ದೇವಸ್ಥಾನಗಳು ಹಾಗೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. ಜಮೀರ್ ನಿನ್ನ ಮಾತ್ರ ಅಲ್ಲ ನಿಮ್ಮ ಸರ್ಕಾರವನ್ನು ನಾಳೆನೇ ಇಲ್ಲಾ ಎನ್ನಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.