ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಸಂಗೀತ ಸಂಯೋಜನೆ ಜೊತೆಗೆ ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಅಭಿಮಾನಿಗಳಿಗೆ ವಿಡಿಯೋ ಸಂದೇಶ ರವಾನಿಸಿ, ನಾನು ಚೆನ್ನಾಗಿದ್ದೇನೆ. ಆದಷ್ಟು ಬೇಗ ಎಲ್ಲರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಅರ್ಜುನ್ ಜನ್ಯ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.
ಫೆಬ್ರವರಿ 26ರಂದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ಶೇ.99ರಷ್ಟು ಬ್ಲಾಕ್ ಇತ್ತು. ಹೀಗಾಗಿ ವೈದ್ಯರು ಅಂದೇ ರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋಗಳಿಂದ ದೂರ ಉಳಿದುಕೊಂಡಿದ್ದಾರೆ.