ನವದೆಹಲಿ: ದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದವರ ಸಂಖ್ಯೆಯ ಇತ್ತೀಚಿನ ದತ್ತಾಂಶವನ್ನು ಒದಗಿಸಿ. ಹಸಿವು ಮುಕ್ತ ದೇಶವನ್ನಾಗಿಸಲು ರಾಷ್ಟ್ರೀಯ ಮಾದರಿ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠವು ಹಸಿವಿನಿಂದ ಸಾವು ಕುರಿತು 2015-16ರ ವರದಿಯನ್ನು ಅಪ್ಡೇಟ್ ಮಾಡದಿರುವ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ನೀವು ಹೇಳುತ್ತೀರಾ? ನಾವು ಆ ಹೇಳಿಕೆಯನ್ನು ಅವಲಂಬಿಸಬಹುದೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಗ್ಯಾಸ್ ವಿತರಣಾ ಯೋಜನೆಗೆ 7000 ಕೋಟಿ ರೂ. ಹೂಡಿಕೆ: ಇಂಡಿಯನ್ ಆಯಿಲ್
ರಾಜ್ಯ ಸರ್ಕಾರಗಳು ಸಹ ಹಸಿವಿನಿಂದ ಸಾವನ್ನಪ್ಪಿದವರ ಕುರಿತು ವರದಿ ಮಾಡಿಲ್ಲ. ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೆ? ಭಾರತ ಸರ್ಕಾರವು ನಮಗೆ ಹಸಿವಿನಿಂದ ಸಾವನ್ನಪ್ಪಿರುವ ಬಗ್ಗೆ ಸೂಕ್ತ ಮಾಹಿತಿ ಮತ್ತು ದತ್ತಾಂಶ ನೀಡಬೇಕು. ನಮಗೆ ಮಾಹಿತಿ ನೀಡಲು ನಿಮ್ಮ ಅಧಿಕಾರಿಗಳನ್ನು ಕೇಳಿ ಎಂದು ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಕೋರ್ಟ್ ಸೂಚಿಸಿದೆ.
ಐದು ರಾಜ್ಯಗಳಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಸರ್ಕಾರಗಳು ಅನೇಕ ಕಲ್ಯಾಣ ಯೋಜನೆಗಳನ್ನು ಘೋಷಿಸುತ್ತಿವೆ. ಸಮುದಾಯ ಅಡುಗೆಮನೆಗಳ ನೀತಿ ಕೇಂದ್ರವನ್ನು ಜನಪ್ರಿಯಗೊಳಿಸುತ್ತದೆ. ಇದು ಚುನಾವಣೆ ಸಮಯ. ನೀವು ನೀತಿಯನ್ನು ರೂಪಿಸಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ನೀಡಿದರೆ, ರಾಜ್ಯಗಳೂ ಈ ನೀತಿಯನ್ನು ಅನುಸರಿಸುತ್ತವೆ ಎಂದು ತಿಳಿಸಿದೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ 16.5 ಲಕ್ಷ ಯುವಕರು ಉದ್ಯೋಗದಿಂದ ವಂಚಿತ: ಪ್ರಿಯಾಂಕಾ ಗಾಂಧಿ
134 ಯೋಜನೆಗಳು ಜಾರಿಯಲ್ಲಿವೆ. ಅಲ್ಲದೇ ರಾಜ್ಯಗಳಿಗೆ ಈಗಾಗಲೇ ಆಹಾರ ಧಾನ್ಯಗಳನ್ನು ವಿತರಿಸುವುತ್ತಿರುವುದರಿಂದ ಹೆಚ್ಚಿನ ಹಣವನ್ನು ಬೇರೆಡೆಗೆ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಕೋರ್ಟ್ಗೆ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಈ ವೇಳೆ ಕೋರ್ಟ್, ಹೆಚ್ಚುವರಿ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಹೇಳಿದೆ.
ಜನರು ಹಸಿವಿನಿಂದ ಬಳಲಬಾರದು, ಸಾಯಬಾರದು ಎಂಬುದು ನಮ್ಮ ಆಶಯ. ನೋಡಲ್ ಯೋಜನೆಯನ್ನು ರೂಪಿಸಲು ನೀವು ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ನಾವು ನ್ಯಾಯಾಲಯದ ಉದ್ದೇಶವನ್ನು ವಿವರಿಸಿದ್ದೇವೆ. ಪರಿಹಾರದ ಮಾರ್ಗವನ್ನು ಗುರುತಿಸಬೇಕಾಗಿದೆ ಎಂದು ಸಿಜೆಐ ರಮಣ ತಿಳಿಸಿದ್ದಾರೆ.
ನೀವು (ಕೇಂದ್ರ) ಹಸಿವನ್ನು ಎದುರಿಸಲು ಏನನ್ನೂ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ರಾಷ್ಟ್ರೀಯ ಮಾದರಿ ಯೋಜನೆಯನ್ನು ಪರಿಗಣಿಸಿ. ಒಂದು ಯೋಜನೆಯನ್ನು ಕರಡು ಮಾಡಿ ಅಂತಿಮಗೊಳಿಸಿ, ನಂತರ ರಾಜ್ಯಗಳ ವಿವೇಚನೆಗೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎರಡು ವಾರಗಳಿಗೆ ಮುಂದೂಡಿತು. ಅಲ್ಲಿಯವರೆಗೂ ಅಪೌಷ್ಟಿಕತೆ, ಹಸಿವು ಮತ್ತು ಇತರ ವಿಷಯಗಳು ಕುರಿತು ರಾಜ್ಯಗಳು ಹೆಚ್ಚುವರಿ ಅಫಿಡವಿಟ್ಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.