ಉಡುಪಿ: ಕರ್ನಾಟಕದಲ್ಲಿ ಲೋಕಾಯುಕ್ತ ಮುಗಿಸಿದಂತೆ ದೇಶದಲ್ಲಿ ಕಾಂಗ್ರೆಸ್ ಲೋಕಪಾಲನ್ನು ಮುಗಿಸ್ತೀರಾ ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಲೋಕಪಾಲ್ ಆಯ್ಕೆ ಸಂಬಂಧ ಐದು ವರ್ಷದಲ್ಲಿ ಒಂದೇ ಒಂದು ಸಭೆಯಲ್ಲಿ ಪಾಲ್ಗೊಳ್ಳದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೋಟ ಗರಂ ಆಗಿದ್ದಾರೆ.
ಉಡುಪಿಯಲ್ಲಿ ಮಾತಮಾಡಿದ ಕೋಟ, ಲೋಕಪಾಲ್ ಬಗ್ಗೆ ಅಣ್ಣಾ ಹಜಾರೆ ಧರಣಿ ಕುಳಿತು ದೊಡ್ಡ ಹೋರಾಟ ಕೊಟ್ಟಿದ್ದರು. ದೇಶದ ಜನರ ಕನಸು ಈಗ ನೆರವೇರಿದೆ. ಆದ್ರೆ ಲೋಕಪಾಲ್ ಬಿಲ್ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಮಸೂದೆ ಅನುಷ್ಠಾನ ಕುರಿತು 5 ವರ್ಷದಲ್ಲಿ 7 ಮೀಟಿಂಗ್ ಆಗಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕ ಅಲ್ಲದಿದ್ದರೂ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಕಾಂಗ್ರೆಸ್ ಸಂಸದೀಯ ನಾಯಕನ ನೆಲೆಯಲ್ಲಿ ಖರ್ಗೆಗೆ ಮೋದಿ ಆಹ್ವಾನ ನೀಡಿದ್ದರು. ಆದರೆ ಒಂದು ಸಭೆಗೆ ಖರ್ಗೆ ಹಾಜರಾಗಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಲೋಕಪಾಲ್ ಬಿಲ್ ಪರವೋ ವಿರುದ್ಧವೋ? ಗೊತ್ತಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಅವರು ಏಳು ಬಾರಿಯೂ ಸಭೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅವರು ಉತ್ತರಿಸಬೇಕು. ಲೋಕಪಾಲ್ ಮಸೂದೆಯನ್ನು ನಿರ್ಲಕ್ಷ್ಯ ಮಾಡುತ್ತೀರಾ ಎಂದು ಕೋಟ ಪ್ರಶ್ನೆ ಹಾಕಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಗಿಸಿದ್ದೀರಿ. ದೇಶದಲ್ಲಿ ಲೋಕಪಾಲ್ ಮುಗಿಸುವ ಆಲೋಚನೆಯಲ್ಲಿದ್ದೀರಾ ಅಂತ ಖರ್ಗೆ ಮತ್ತು ಕಾಂಗ್ರೆಸ್ ವಿರುದ್ಧ ಕೋಟ ಕುಟುಕಿದ್ದಾರೆ.
ಖರ್ಗೆ ಗೈರಾಗಿದ್ದು ಯಾಕೆ?
ಲೋಕಪಾಲರ ನೇಮಕ ಸಂಬಂಧ ಇರುವ ಸಮಿತಿಯಲ್ಲಿ ವಿರೋಧ ಪಕ್ಷ ನಾಯಕರು ಸದಸ್ಯರಾಗಿರುತ್ತಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಯಾರು ಪಡೆಯದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನು ನೀಡಿರಲಿಲ್ಲ. ಖರ್ಗೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಲೋಕಪಾಲ್ ನೇಮಕ ಸಂಬಂಧ ಖರ್ಗೆ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿತ್ತು. ವಿಶೇಷ ಆಹ್ವಾನಿತರಾಗಿ ನಾನು ತೆರಳುವುದಿಲ್ಲ ಎಂದು ಹೇಳಿ ಖರ್ಗೆ ಲೋಕಪಾಲ್ ಆಯ್ಕೆ ಸಂಬಂಧ ಕರೆದಿದ್ದ ಸಭೆಗೆ ಗೈರು ಹಾಜರಿ ಹಾಕಿದ್ದರು.