ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ನಗರಿಯನ್ನು ಕಟ್ಟಿದ್ದು, ಹೆಸರು ಕೊಟ್ಟಿದ್ದು ನಿಜವಾಗಲೂ ಕೆಂಪೇಗೌಡರಲ್ವಾ? ಹಾಗಿದ್ರೆ ಬೆಂಗಳೂರನ್ನ ನಿಜವಾಗ್ಲೂ ನಿರ್ಮಿಸಿದ್ದು ಯಾರು? ಯಾವಾಗ? ಈ ಎಲ್ಲಾ ಪ್ರಶ್ನೆಗಳನ್ನಿಟ್ಟುಕೊಂಡು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ ಬೆಂಗಳೂರಲ್ಲಿ ಸಿಕ್ಕ ಮೊದಲ ಶಿಲಾಶಾಸನ.
900ನೇ ಇಸವಿಯಲ್ಲೇ ಬೆಂಗಳೂರು ಪ್ರಾಂತ್ಯ ಇತ್ತು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆಯಂತೆ. ಹೌದು. ಇಂತಹದ್ದೊಂದು ಇತಿಹಾಸವನ್ನೇ ಬದಲಾಯಿಸುವಂತ, ಕೆಂಪೇಗೌಡರನ್ನೇ ಪ್ರಶ್ನೆ ಮಾಡುವಂತಹ ಶಿಲಾಸನ ಬೆಂಗಳೂರಿನ ಬೇಗೂರು ರಸ್ತೆಯಲ್ಲಿರೋ ನಗರೇಶ್ವರ ದೇಗುಲದಲ್ಲಿ ಈಗ ಇತಿಹಾಸ ತಜ್ಞರ ಕಣ್ಣಿಗೆ ಬಿದ್ದಿದೆ. ಇದರ ಜೊತೆಗೆ ಗಂಗರ ಕಾಲದ ಹಲವು ಕಲ್ಲಿನ ಕೆತ್ತನೆಗಳ ತುಂಡುಗಳು ಈ ದೇಗುಲದಲ್ಲಿದೆ.
900 ಇಸವಿಯಲ್ಲಿ ಬೆಂಗಳೂರು ಪ್ರಾಂತ್ಯ ಇತ್ತು. ನಗಾತಾರ ರಾಜನ ಮಗ ಬೆಂಗಳೂರು ಕಾಳಗದಲ್ಲಿ ಸತ್ತ ಎನ್ನುವ ಪ್ರಸ್ತಾಪ ಈ ಕಲ್ಲಿನ ಶಾಸನದಲ್ಲಿ ಅಡಕವಾಗಿದೆ. ನಗಾತಾರ ರಾಜ ಇದ್ದಿದ್ದು ಗಂಗರ ಕಾಲದಲ್ಲಿ ಅಂದರೆ ಸುಮಾರು 900 ನೇ ಇಸವಿಯಲ್ಲಿ. ಆಗಲೇ ಬೆಂಗಳೂರು ಹೆಸರು ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಹಳೆಗನ್ನಡದ ಈ ಶಿಲಾಶಾಸನದಲ್ಲಿ ಪುರಾವೆಗಳಿವೆ. ಆದರೆ ಈ ಶಿಲಾ ಶಾಸನವನ್ನು ಇದುವರೆಗೂ ಇಲ್ಲಿನ ಜನ ಪುರಾತತ್ವ ಇಲಾಖೆಗೆ ನೀಡಿರಲಿಲ್ಲ.
ಈಗ ದೇಗುಲದ ಅಂಗಳದಲ್ಲಿರುವ ಅಪರೂಪದ ಶಾಸನದ ಬೆನ್ನುಬಿದ್ದಿರುವ ಪುರಾತತ್ವ ತಜ್ಞರ ತಂಡ 900ನೇ ವರ್ಷದಲ್ಲೇ ಬೆಂಗಳೂರು ಹೆಸರು ಕೆತ್ತಿರುವ ಕೆತ್ತನೆಯನ್ನು ಪತ್ತೆ ಹಚ್ಚಿದೆ. ಆದರೆ ಇದು ನಿಜನಾ? ಕೆಂಪೇಗೌಡರು ಬೆಂಗಳೂರನ್ನು ಕಟ್ಟಲಿಲ್ವಾ ಎಂಬುದರ ಬಗ್ಗೆ ಆಳವಾದ ಅಧ್ಯಯನವೂ ಸದ್ದಿಲ್ಲದೇ ಶುರುವಾಗಿದೆ.