-ಏ.12ರಂದು ಕರ್ನಾಟಕ ಬಂದ್
ಬೆಂಗಳೂರು: ನನಗೂ ಕೆಲಸವಿದೆ ರಾಜ್ಯದ ಕಳಕಳಿಯಿಂದ ಕೆಲಸ ಮಾಡುತ್ತಾ ಇದ್ದೀನಿ. ನಾನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ ಎಂದೂ ಭಿಕ್ಷೆ ಬೇಡಿಲ್ಲ. ತಮಿಳುನಾಡು ಬಂದ್ ಬಗ್ಗೆ ಮಾಧ್ಯಮದವರು ಮಾತಾನಾಡುವುದಿಲ್ಲ ಎಂದು ಮಾಧ್ಯಮದವರ ವಿರುದ್ಧ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ಏಪ್ರಿಲ್ 12 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಿದಾಗ ಮಾಧ್ಯಮದಲ್ಲಿ ನನ್ನ ಬಗ್ಗೆ ನೆಗೆಟಿವ್ ಸುದ್ದಿಯಾಗುತ್ತದೆ. ಆದ್ರೆ ತಮಿಳುನಾಡು ಬಂದ್ ಬಗ್ಗೆ ಮಾಧ್ಯಮದವರು ಮಾತಾನಾಡುವುದಿಲ್ಲ. ಬಂದ್ ದಿನ ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ಇರುತ್ತದೆ. ಹೀಗಾಗಿ ಬಸ್ ಸಂಚಾರ ಮಾಡದಂತೆ ಎಚ್ಚರಿಕೆ ನೀಡಿದರು. ನೀತಿ ಸಂಹಿತೆಗೂ ಬಂದ್ಗೂ ಸಂಬಂಧವಿಲ್ಲ. ಅನ್ಯಾಯವಾಗಿದೆ ಬಂದ್ ಮಾಡುತ್ತಿದ್ದೇವೆ. ಮೊನ್ನೆ ಗಡಿ ಬಂದ್ ಮಾಡಲಿಲ್ಲವಾ ಚುನಾವಣೆ ನಿಲ್ಲುವವರಿಗೆ ತೊಂದರೆಯಾಗಬಹುದು. ಚುನಾವಣೆ ನೀತಿ ಸಂಹಿತೆ ಅಂತಾ ಬಾಯಿಗೆ ಬಟ್ಟೆ ಹಾಕಿಕೊಂಡು ಇರುವುದಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದರು.
ಕಮಲ ಹಾಸನ್, ರಜನೀಕಾಂತ್ ಯಾರು ನೀವು? ಕನ್ನಡಿಗರ ಋಣ ನಿಮ್ಮ ಮೇಲಿದೆ. ಕನ್ನಡದ ನೆಲದಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿದ್ದೀರಾ. ರಜನೀಕಾಂತ್, ಕಮಲ್ ಹಾಸನ್ ಕನ್ನಡದ ನೆಲಕ್ಕೆ ಇನ್ನು ಮುಂದೆ ಕಾಲಿಡಬಾರದು ಎಂದು ನೇರ ಎಚ್ಚರಿಕೆ ನೀಡಿದ ಅವರು, ಕಮಲ್ ಹಾಸನ್ ಮರಾಠಿಯವನು. ಅಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಯಾರಿಲ್ಲ, ಯಾರು ಧ್ವನಿಯೆತ್ತುವುದಿಲ್ಲ. ನಾರಾಯಣ ಗೌಡರಿಗೂ ಮನವಿ ಮಾಡುತ್ತೇನೆ, ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಬಂದ್ಗೆ ಬೆಂಬಲ ಕೊಡಿ ಎಂದು ಕೇಳಿಕೊಂಡರು.
ಸ್ಟಾಲಿನ್ ಬಂಧನ ಮಾಡಬೇಕಾಗಿತ್ತು. ನರೇಂದ್ರ ಮೋದಿಗೆ ಮರ್ಯಾದೆ ಇಲ್ಲ, ಅವರಿಗೆ ತಮಿಳುನಾಡಿನಲ್ಲಿ ರಾಜಕೀಯ ಮಾಡಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಇಲ್ಲವೇ ಇಲ್ಲ ಎಂದು ಸಂಸದರನ್ನು ಹಾಗೂ ಕೇಂದ್ರ ಸರ್ಕಾರವನ್ನು ದೂರಿದ ಅವರು, ಹೈಕೋರ್ಟ್ ಗೆ ಹೋಗಿ ಕಿತಾಪತಿ ಮಾಡುವವರು. ಮೋಸ ಮಾಡುವವರು ಕರ್ನಾಟಕದಲ್ಲಿ ಮಾತ್ರ. ಬಂದ್ ಬೇಡ ಅಂತಾ ಕೋರ್ಟ್ ಗೆ ಹೋಗುವವರು ಕನ್ನಡ ದ್ರೋಹಿಗಳು ಅಂತ ಗರಂ ಆದ್ರು.
ಇದೇ ವೇಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದ್ ಮಾತನಾಡಿ, ನಮಗೆ ಬಂದ್ ಕರೆಯುವ ಉದ್ದೇಶವಿರಲಿಲ್ಲ, ಆದರೆ ತಮಿಳುನಾಡು ಇದಕ್ಕೆ ದಾರಿ ಮಾಡಿಕೊಟ್ಟಿದೆ. ತಮಿಳುನಾಡು ರಾಜಕೀಯ ನಾಯಕರಿಗೆ, ಅಲ್ಲಿನ ಸಿನಿಮಾ ರಂಗದ ರಜನೀಕಾಂತ್, ಕಮಲ್ ಹಾಸನ್ ಯಾರಿಗೂ ಸೌಹಾರ್ದಯುತವಾಗಿ ಕರ್ನಾಟಕದ ಜೊತೆ ಮಾತುಕತೆ ಮಾಡುವ ಉದ್ದೇಶವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆ ಈ ಬಾರಿಯೂ ಜೂನ್ ಜುಲೈ ತಿಂಗಳ ಬೆಳಗ್ಗೆ ಹೋಗ್ಲಿ ಕುಡಿಯೋದಕ್ಕೆ ನೀರು ಇರುವುದಿಲ್ಲ. ರಾಜ್ಯದ ರಾಜಕೀಯ ಪಕ್ಷಗಳು ಒಂದಾಗಬೇಕು. ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ತಮಿಳುನಾಡಿನ ನಿಲುವಿಗೆ ವಿರೋಧ ವ್ಯಕ್ತಪಡಿಸಬೇಕಾಗಿದೆ ಎಂದರು.
ನಮ್ಮ ಸಂಸದರು ರಾಜೀನಾಮೆ ಹೋಗಲಿ, ಬಾಯಿಬಿಡುವುದು ಇಲ್ಲ. ತಮಿಳುನಾಡು ಕರೆ ಕೊಟ್ಟ ಬಂದ್ಗೆ ವಿರೋಧಿಸಿ ನಾವು ಪ್ರತಿಯಾಗಿ ಕರ್ನಾಟಕ ಬಂದ್ ಕರೆ ಕೊಡುತ್ತೇವೆ. ಏಪ್ರಿಲ್ 12 ರಂದು ಕರ್ನಾಟಕ ಬಂದ್. ಇದರಿಂದ ನಾವು ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಆದ್ರೆ ಏ.9ರಂದು ತೀರ್ಪು ನೋಡುತ್ತೇವೆ. ಅದರಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಹೇಳಿದರು.
ಕೆಎಸ್ಆರ್ ಟಿಸಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ ನಮ್ಮ ಬಂದ್ಗೆ ಬೆಂಬಲ ಕೊಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು. ಕರವೇ ಅಧ್ಯಕ್ಷ ಗಿರೀಶ್ ಗೌಡ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.