ಅಪ್ಪು (Appu) ಇಲ್ಲ. ಆದರೆ ಅವರ ಕನಸುಗಳು ಇನ್ನೂ ಜೀವಂತವಾಗಿವೆ. ಒಂದಾ ಎರಡಾ? ಏನೇನೊ ಮಾಡಬೇಕೆಂದು ಅವರು ಬಯಸಿದ್ದರು. ಯಾವ್ಯಾವುದೋ ಸಿನಿಮಾಗಳನ್ನು ಮಾಡುವ ಬಯಕೆ ಹೊತ್ತಿದ್ದರು. ಆದರೆ ಅದು ಮುಗಿಯಲಿಲ್ಲ. ಆದರೆ ಅದನ್ನು ಪೂರ್ತಿ ಮಾಡಲು ಸಜ್ಜಾಗಿದ್ದಾರೆ ಪತ್ನಿ ಅಶ್ವಿನಿ (Ashwini Puneet Raj Kumar). ಪತಿಯ ಒಂದೊಂದೆ ಆಸೆ, ಒಂದೊಂದೇ ಕನಸು, ಒಂದೊಂದೇ ಲೋಕವನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ಅಪ್ಪು ಮಹಾ ಕನಸುಗಳನ್ನು ಹೊತ್ತಿದ್ದರು. ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದರು. ಅಭಿನಯದ ಜೊತೆಜೊತೆಗೆ ಬೇರೇನೊ ಮಾಡಬೇಕೆನ್ನುವ ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅವರು ಮೊಟ್ಟ ಮೊದಲು ಆರಂಭಿಸಿದ್ದು ಪಿಆರ್ಕೆ (PRK) ಬ್ಯಾನರ್. ಪಾರ್ವತಮ್ಮ ರಾಜ್ಕುಮಾರ್ ಬ್ಯಾನರ್. ಆ ಬ್ಯಾನರ್ನಿಂದ ಅವರು ಅನೇಕ ಸಿನಿಮಾಗಳನ್ನು ಈಗಾಗಲೇ ಮಾಡಿದ್ದಾರೆ. ಅವರ ಉದ್ದೇಶ ಇದ್ದದ್ದು ಒಂದೇ. ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ನಿರ್ದೇಶಕರು, ನಟ ನಟಿಯರು, ತಂತ್ರಜ್ಞರು ಎಲ್ಲರಿಗೂ ಬಣ್ಣದಲೋಕದಲ್ಲಿ ಬೆಳಗುವ ಅದೃಷ್ಟ ನೀಡಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅನೇಕ ಸಿನಿಮಾ ನಿರ್ಮಿಸಿದರು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ
ಪಿಆರ್ಕೆ ಬ್ಯಾನರ್ನಿಂದ ಈಗಾಗಲೇ ಅನೇಕ ಸಿನಿಮಾ ಹೊರ ಬಂದಿವೆ. ಹೊಸ ಹೊಸ ನಿರ್ದೇಶಕರು ಹುಟ್ಟಿಕೊಂಡಿದ್ದಾರೆ. ಹೊಸ ಹೊಸ ನಟ ನಟಿಯರು ಹೊಳೆಯುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞರು ಮೆರೆಯುತ್ತಿದ್ದಾರೆ. ಅವರಿಗೆಲ್ಲ ಅಣ್ಣನಂತೆ ನಿಂತಿದ್ದು ಪುನೀತ್ ರಾಜ್ಕುಮಾರ್ (Puneet Raj Kumar) . ಮೊಟ್ಟ ಮೊದಲು ಅವರು ಕತೆ ಕೇಳುತ್ತಿದ್ದರು. ಕತೆಯೇ ಜೀವಾಳ ಎಂದು ಕಾಸು ಸುರಿಯುತ್ತಿದ್ದರು. ಸಿನಿಮಾದ ಸೋಲು ಗೆಲುವು ಮುಖ್ಯ ಅಲ್ಲ. ಆಯಾ ಸಿನಿಮಾ ಜನರಿಗೆ ಮುಟ್ಟಿಸುವ ಸಂದೇಶ ಮುಖ್ಯ ಎನ್ನುತ್ತಿದ್ದರು. ಇನ್ನೂ ಅನೇಕ ಸಿನಿಮಾ ಮಾಡಬೇಕಿತ್ತು. ಅಷ್ಟರಲ್ಲಿ ಹೋಗಿ ಬಿಟ್ಟರು. ಈಗ ಪತಿ ಕನಸುಗಳನ್ನು ಈಡೇರಿಸಲು ಅಶ್ವಿನಿ ಪುನೀತ್ ರಾಜ್ಕುಮಾರ್ ಸಜ್ಜಾಗಿದ್ದಾರೆ. ಅಖಾಡಕ್ಕೆ ಇಳಿದಿದ್ದಾರೆ.
ಅಪ್ಪು ಹೋಗಿ ಎರಡು ವರ್ಷಗಳಾದವು. ಆ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಹಿಂಡುತ್ತಿದೆ. ಆದರೆ ಪತಿ ಕನಸುಗಳನ್ನು ಅಲ್ಲಲ್ಲೇ ಬಿಡಬಾರದಲ್ಲವೆ ? ಅದಕ್ಕಾಗಿಯೇ ಅಶ್ವಿನಿ ಅಂದೇ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಅಪ್ಪು ಏನೇನು ಆಸೆ ಪಟ್ಟಿದ್ದರೋ, ಏನೇನೊ ಸಿನಿಮಾಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದರೊ, ಅದನ್ನೆಲ್ಲ ಈಗ ಇವರು ಮಾಡಲು ತಯಾರಾಗಿದ್ದಾರೆ. ಪಿಆರ್ಕೆ ಬ್ಯಾನರ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರ ಮೊದಲ ಮೆಟ್ಟಿಲಾಗಿ ಎರಡು ಸಿನಿಮಾ ತಯಾರಾಗಿವೆ. ಬಿಡುಗಡೆಗೆ ಸಿದ್ಧವಾಗುತ್ತಿವೆ. ಆಚಾರ್ ಅಂಡ್ ಕೋ ಹಾಗೂ ಓಟು ಸಿನಿಮಾಗಳು ಜನರ ಮುಂದೆ ಬರಲು ಸಜ್ಜಾಗಿವೆ.
ಇನ್ನೊಂದು ಕಡೆ ಅನೇಕ ಹೊಸಬರ ಕತೆಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಹೆಚ್ಚು ಕಮ್ಮಿ ಹದಿನೈದು ಕತೆಗಳನ್ನು ಕೇಳಿದ್ದಾರೆ. ಎಲ್ಲರೂ ಹೊಸಬರೇ. ಯಾರನ್ನೂ ಅವರು ನಿರಾಸೆ ಮಾಡುವುದಿಲ್ಲ. ಯಾವ್ಯಾವುದೋ ಕನಸು ಹೊತ್ತು ಬಂದಿರುವ ಆ ಜೀವಗಳನ್ನು ಪ್ರೀತಿಯಿಂದ ಕೂಡಿಸಿ ಕತೆ ಕೇಳುತ್ತಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈ ಹದಿನೈದು ಕತೆಗಳಲ್ಲಿ 2 ಕತೆಯನ್ನು ಮಾತ್ರ ಅವರು ಓಕೆ ಮಾಡಿದ್ದಾರೆ. ಅದು ಯಾವುದೆಂದು ಗೊತ್ತಾಗಿಲ್ಲ. ಅದರ ಶೂಟಿಂಗ್ ಶುರು ಮಾಡುವ ಎಲ್ಲ ಸಿದ್ದತೆಗಳು ನಡೆಯುತ್ತಿವೆ. ಒಂದು ಹಂತ ಬಂದ ಮೇಲೆ ಆ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.
ಇನ್ನೊಂದು ಕಡೆ ಪಕ್ಕಾ ಹೊಸಬರ ತಂಡದ ಜತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ. ಮತ್ತೊಂದು ಅನುಭವಿ ತಂಡಕ್ಕೂ ಬಂಡವಾಳ ಹಾಕಲಿದ್ದಾರೆ. ಈ ವರ್ಷದ ಕೊನೆಗೆ ಎರಡೂ ಸಿನಿಮಾಗಳ ಮುಹೂರ್ತ ನಡೆಯಲಿದೆ. ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಶ್ವಿನಿ ಪುನೀತ್ ಈಗ ಪಿಆರ್ಕೆ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಹೊಸ ಹೆಜ್ಜೆ ಇಟ್ಟಿದ್ದಾರೆ. ಪತಿ ಕಂಡಿದ್ದ ಅನೇಕ ಕನಸುಗಳನ್ನು ಈಡೇರಿಸಲು ಏನೇನು ಬೇಕೊ ಎಲ್ಲವನ್ನೂ ಮಾಡುತ್ತಿದ್ದಾರೆ.