ಕೊಪ್ಪಳ: ಕನ್ನಡಿಗರ ಪ್ರೀತಿಯ ಪುನೀತ್ ರಾಜಕುಮಾರ್ ಸಂಭಾವನೆ ಪಡೆಯದೇ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ಕೆಎಂಎಫ್, ಸರ್ಕಾರಿ ಶಾಲೆಗಳ ಕುರಿತ ಜಾಹೀರಾತಿಗೆ ಉಚಿತವಾಗಿ ಅಭಿನಯಿಸಿದ್ದರು.
ಆ ರೀತಿ ಸಣ್ಣ ಪುಟ್ಟ ಜನಪರ ಜಾಗೃತಿ ಕಾರ್ಯಕ್ರಮದಲ್ಲೂ ಅಪ್ಪು ಹಿಂದೆ ಮುಂದೆ ನೋಡದೇ ಭಾಗಿಯಾಗಿದ್ದನ್ನು ಕೊಪ್ಪಳ ಪೊಲೀಸರು ಸ್ಮರಿಸಿಕೊಳ್ಳುತ್ತಿದ್ದಾರೆ. ತಾವು ಒಬ್ಬ ದೊಡ್ಡ ಸ್ಟಾರ್ ಎಂಬ ಹಮ್ಮು-ಬಿಮ್ಮು ತೋರಿಸದೆ ಪೊಲೀಸರು ಕೈಗೊಂಡಿದ್ದ ಕೊರೊನಾ ಜಾಗೃತಿಯ ಭಾಗವಾಗಿ ಪುನೀತ್ ಅವರು ಕೊರೊನಾ ನಿಯಮವನ್ನು ಜನರು ಪಾಲನೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಜಮೀನು ವಿವಾದ – ಕಾರಿಗೆ ಬೆಂಕಿ ಹಚ್ಚಿ, ಪರಸ್ಪರ ಕಲ್ಲು ತೂರಾಟ ಮಾಡಿ ಆಕ್ರೋಶ
ಕಳೆದ 2020ರ ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಕೊಪ್ಪಳದ ಗಂಗಾವತಿ ತಾಲೂಕಿನ ಮಲ್ಲುಪರ ಗ್ರಾಮದಲ್ಲಿ ‘ಜೇಮ್ಸ್’ ಚಿತ್ರದ ಚಿತ್ರಿಕರಣಕ್ಕಾಗಿ ಆಗಮಿಸಿದ್ದಾಗ ಇಲ್ಲಿ ಸುಮಾರು ಒಂದು ವಾರಗಳ ಕಾಲ ತಂಗಿದ್ದರು. ಆಗ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿದ್ದರು.
ಆಗ ಪುನೀತ್ ಅವರನ್ನು, ಗಂಗಾವತಿ ಪೊಲೀಸರು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದರಂತೆ, ತಕ್ಷಣ ಹಿಂದೆ ಮುಂದೆ ನೋಡದೆ ಸ್ಥಳಕ್ಕೆ ಆಗಮಿಸಿ ಕೊರೊನಾ ಓಡಿಸುವ ಕುರಿತು ಮಾತನಾಡಿದ್ದರು. ಅಂದು ಅವರು ಮಾತನಾಡಿದ ವೀಡಿಯೋವನ್ನು ಪೊಲೀಸರು ಈಗಲೂ ಜಾಗೃತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!
ಯಾವುದೇ ತಾರತಮ್ಯವಿಲ್ಲದೇ ಜನರೊಂದಿಗೆ ಬೆರೆಯುತ್ತಿದ್ದ ಅಪ್ಪು, ಈಗ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಮೀಣ ಠಾಣಾ ಪಿಎಸ್ಐ ನೆನಪಿಸಿಕೊಳ್ಳುತ್ತಾರೆ.