ಚಿತ್ರaದುರ್ಗ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅರ್ಹರಿಗೆ ಅಪ್ಪುಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಅಪ್ಪು ಅಭಿಮಾನಿಗಳು ಚಿತ್ರದುರ್ಗದಿಂದ ಬೆಂಗಳೂರಿಗೆ ಬರಿಗಾಲಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.
ಚಿತ್ರದುರ್ಗದ ಗಾಂಧಿ ಸರ್ಕಲ್ನಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ, ಬೆಂಗಳೂರಿನಲ್ಲಿರುವ ಅಪ್ಪು ಸ್ಮಾರಕದ ಸ್ಥಳಕ್ಕೆ ಬರಿಗಾಲಿನಲ್ಲಿ ಬರಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಅಪ್ಪು ಭಾವಚಿತ್ರವಿರುವ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿಕೊಂಡು ಚಿತ್ರದುರ್ಗದ ಯುವಕರಾದ ರಾಘವೇಂದ್ರ ಹೆಗ್ಗಡೆ, ಮಂಜುನಾಥ್, ಲೊಕೇಶ್ ಡಿಸೆಂಬರ್ 10ರಂದು ಅಪ್ಪು ಸ್ಮಾರಕ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ
ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ, ದೊಡ್ಮನೆ ಕುಟುಂಬವನ್ನು ಸಹ ಭೇಟಿಯಾಗಲಿರುವ ಈ ಅಭಿಮಾನಿಗಳು, ಪುನೀತ್ ಅವರ ಸಾಮಾಜಿಕ ಸೇವಾಕಾರ್ಯಗಳು ಜೀವಂತವಾಗಿರಬೇಕು. ಮುಂದಿನ ಪೀಳಿಗೆಗೆ ಬಳುವಳಿಯಾಗಿ ಬರಬೇಕು ಎಂಬ ಉದ್ದೇಶದಿಂದ ಅರ್ಹರಿಗೆ ‘ಅಪ್ಪುಶ್ರೀ ಪ್ರಶಸ್ತಿ’ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ.
ಹಾಗೆಯೇ ದೊಡ್ಮನೆ ಕುಟುಂಬದಿಂದಲೇ ಅಪ್ಪುಶ್ರೀ ಪ್ರಶಸ್ತಿ ನೀಡುವಂತೆ ನಟ ಶಿವರಾಜಕುಮಾರ್ ಹಾಗು ಪುನೀತ್ ಪತ್ನಿ ಅಶ್ವಿನಿ ಅವರಿಗೆ ಮನವಿ ಸಲ್ಲಿಸುವುದಾಗಿ ಪಾದಯಾತ್ರೆ ನಡೆಸುತ್ತಿರುವ ರಾಘವೇಂದ್ರ ಅವರು ತಿಳಿಸಿದ್ದಾರೆ. ಇವರ ಪಾದಯಾತ್ರೆಗೆ ಜಿಲ್ಲೆಯ ಅನೇಕ ಜನರು ಸಾಥ್ ನೀಡಿದ್ದು, ಅವರೆಲ್ಲರೂ ನಾಳೆ ತುಮಕೂರಿನಿಂದ ಇವರ ಪಾದಯಾತ್ರೆಗೆ ಸೇರ್ಪಡೆಯಾಗಲಿದ್ದಾರೆ.