ರಾಯಚೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಾಗೂ ‘ಜೇಮ್ಸ್’ ಸಿನಿಮಾ ಬಿಡುಗಡೆಯನ್ನು ದೊಡ್ಡ ಉತ್ಸವವನ್ನಾಗಿ ಆಚರಿಸಲು ಇಡೀ ರಾಜ್ಯ ಸಜ್ಜಾಗುತ್ತಿದೆ. ರಾಯಚೂರಿನಲ್ಲಿ ಅಭಿಮಾನಿಗಳು ಒಂದು ಹೆಜ್ಜೆ ಮುಂದೆಹೋಗಿ ನೂತನ ಅಂಗನವಾಡಿ ಕೇಂದ್ರ ಹಾಗೂ ರಸ್ತೆಗೆ ಅಪ್ಪು ಹೆಸರು ನಾಮಕರಣ ಮಾಡಿದ್ದಾರೆ. ಅಪ್ಪು ಸಾಧನೆ, ಸೇವೆಗಳ ಫಲಕಗಳನ್ನು ಹಾಕಿದ್ದಾರೆ. ಸ್ವತಃ ಶಿವಣ್ಣ ಅಪ್ಪು ಫ್ಯಾನ್ಸ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ವಾರ್ಡ್ ನಂ.16 ತಿಮ್ಮಾಪುರ ಪೇಟೆಯಲ್ಲಿ ಈಗ ಅಪ್ಪು ಹವಾ ಜೋರಾಗಿದೆ. ಇಲ್ಲಿನ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಏಕೆಂದರೆ ಇಲ್ಲಿನ ಇಡೀ ಏರಿಯಾ ಅಪ್ಪುಮಯವಾಗಿದೆ. ಸುಮಾರು ವರ್ಷಗಳಿಂದ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಈಗ ಕೆಕೆಆರ್ಡಿಬಿಯ 15 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಅದಕ್ಕೆ ‘ಅಪ್ಪು ಅಂಗನವಾಡಿ ಕೇಂದ್ರ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್
ಎಲ್ಲಿ ನೋಡಿದ್ರೂ ಅಪ್ಪು ಭಾವಚಿತ್ರ, ವರ್ಲಿ ಕಲೆಯಲ್ಲೂ ಅಪ್ಪು ಚಿತ್ರ ಬಿಡಿಸಿ ಅಂಗನವಾಡಿ ಕೇಂದ್ರವನ್ನು ಅಲಂಕರಿಸಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡಬೇಕು ಅನ್ನೋದು ಇಲ್ಲಿನ ಪ್ರತಿಯೊಬ್ಬರ ಆಸೆಯಾಗಿತ್ತು. ಅಪ್ಪು ಸಮಾಜಸೇವೆ ಮೂಲಕ ಮಹಾನ್ ವ್ಯಕ್ತಿಯಾಗಿದ್ದಾರೆ. ಈ ಹೆಸರನ್ನೇ ಅಧಿಕೃತವಾಗಿ ಇಡಲು ಅಧಿಕಾರಿಗಳು ಸರ್ಕಾರ ಅನುಮತಿ ಕೊಡಬೇಕು ಎಂದು ಇಲ್ಲಿನ ಜನ ಕೋರಿದ್ದಾರೆ.
ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳನ್ನ ಅಪ್ಪು ಅಂಗನವಾಡಿ ಕೇಂದ್ರ ಎಂದು ನಾಮಕರಣ ಮಾಡಲು ಸ್ಥಳೀಯ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ. ಅನಾಥಾಶ್ರಮ, ಗೋಶಾಲೆ, ಉಚಿತ ಶಾಲೆ, ವೃದ್ದಾಶ್ರಮ, ಶಕ್ತಿಧಾಮ ಮೂಲಕ ಅಪ್ಪು ಅಮರರಾಗಿದ್ದಾರೆ. ಇಲ್ಲಿನ ಹನುಮಾನ್ ಟಾಕೀಸ್ನಿಂದ ಶಶಿಮಹಲ್ ಟಾಕೀಸ್ವರೆಗಿನ ನೂತನ ರಸ್ತೆಗೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ: ‘ದೇವರ ಹೆಸರಿನಲ್ಲಿ… ಈ ಹತ್ಯಾಕಾಂಡವನ್ನು ನಿಲ್ಲಿಸಿ’: ಪೋಪ್ ಫ್ರಾನ್ಸಿಸ್ ಮನವಿ
ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ‘ಅಪ್ಪು ಅಂಗನವಾಡಿ ಕೇಂದ್ರ’ವನ್ನು ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಬಳಿಕ ಶಿವರಾಜ್ ಕುಮಾರ್ ಜೊತೆ ವೀಡಿಯೋ ಕಾಲ್ನಲ್ಲಿ ಮಾತಾಡಿ ರಾಯಚೂರು ಜನರ ಅಭಿಮಾನದ ಬಗ್ಗೆ ತಿಳಿಸಿದ್ದಾರೆ. ಅಪ್ಪು ಹುಟ್ಟುಹಬ್ಬ ಹಿನ್ನೆಲೆ ಮುಂಚಿತವಾಗಿಯೇ ಗರ್ಭಿಣಿಯರಿಗೆ ಉಡಿತುಂಬುವ ಕಾರ್ಯಕ್ರಮ ಮಾಡಲಾಯಿತು.