ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರ್ವಜನಿಕರು ಮುಖ್ಯಮಂತ್ರಿಗೆ ಕೊಟ್ಟ ಮನವಿಗಳು ಕಸದ ರಾಶಿ ಸೇರಿವೆ.
ಜು.10 ರಂದು ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಆ ವೇಳೆ ರೈತ ಸಂಘದ ನಾಯಕರು ಸಿಎಂ ಸಿದ್ದರಾಮಯ್ಯಗೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿ ಪತ್ರಗಳನ್ನು ಕೊಟ್ಟಿದ್ದರು. ಆದರೆ ಈ ಮನವಿ ಪತ್ರಗಳು ಇದೀಗ ಕಸದ ಬುಟ್ಟಿ ಸೇರಿವೆ. ಇದನ್ನೂ ಓದಿ: 2 ತಿಂಗಳಿಂದ ಊರ ಮಂದಿಗೆ ಒಂದೇ ಕಾಯಿಲೆ; ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಿಲ್ಲ – ಚಿಕ್ಕಮಗಳೂರಿನ ಗ್ರಾಮದಲ್ಲಿ ಆತಂಕ
ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ಮನವಿ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ಆಗುತ್ತದೆ ಎನ್ನುವುದು ಜನರ ಭರವಸೆ. ಆದರೆ ಮುಖ್ಯಮಂತ್ರಿಗಳು ಸ್ವೀಕರಿಸಿದ್ದ ಮನವಿ ಪತ್ರಗಳು ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಸದ ರಾಶಿಯಲ್ಲಿ ಬಿದ್ದಿವೆ. ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಮನವಿ ಸಲ್ಲಿಸಿದ್ದ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು, ಇದು ದುರಹಂಕಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರೂ ಯಾಕೆ? ರೈತರ ಬಗ್ಗೆ ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿಗೆ ಸಲ್ಲಿಸುವ ಮನವಿಗಳ ಕಥೆ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ಮಾಡಿದಾಗ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಸದ ರಾಶಿ ಸೇರಿದ ಮನವಿ ಪತ್ರಗಳ ವೀಡಿಯೋ ವೈರಲ್ ಆಗಿದೆ.