ಉದಯ ಟಿವಿ, ಹೊಸ ಟ್ರೆಂಡ್ಸ್ಗೆ ಅನುಗುಣವಾಗಿ ವಿಭಿನ್ನ ರೀತಿಯ ಭಾವನಾತ್ಮಕ ಕಥಾಹಂದರದ ಹೊಂದಿರುವ ಹೊಸ ʻಮಾಂಗಲ್ಯʼ ಧಾರಾವಾಹಿ ಪ್ರಸಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ʻಮಂಗಳವಾರ ಮಾಂಗಲ್ಯವಾರʼ ಎಂಬ ಘೋಷವಾಕ್ಯದೊಂದಿಗೆ ಸೆಪ್ಟೆಂಬರ್ 2ರ ಮಂಗಳವಾರದಿಂದ ಸಂಜೆ 7 ಗಂಟೆಗೆ ಹೊಸ ʻಮಾಂಗಲ್ಯʼ ಆರಂಭವಾಗಲಿದೆ. ಈ ರೀತಿ ಮಂಗಳವಾರ ಪ್ರಸಾರ ಆರಂಭಿಸುತ್ತಿರುವ ಕನ್ನಡದ ಮೊಟ್ಟಮೊದಲ ಧಾರಾವಾಹಿ ʻಮಾಂಗಲ್ಯʼ.
ದುರ್ಗಾಪುರದ ಮಯೂರಿ ಮನೆ ಮಗನಂತೆ ಎಲ್ಲ ಜವಾಬ್ದಾರಿ ನಿಭಾಯಿಸುವಂಥ ಹುಡುಗಿ. ಕೃಷಿ ಕೆಲಸ, ಹೈನುಗಾರಿಕೆಯಲ್ಲಿ ಎತ್ತಿದ ಕೈ. ನಗರದ ಶ್ರೀಮಂತ ಕುಟುಂಬದ ತೋಟದ ಉಸ್ತುವಾರಿ ಸಹ ಇವಳದೇ. ಆ ಶ್ರೀಮಂತ ಕುಟುಂಬದ ಕುಲಪುತ್ರನೇ ಕಥಾನಾಯಕ ತಾರಕ್. ಶ್ರೀಮಂತಿಕೆಯ ಅಹಂಕಾರದಲ್ಲಿ ಮೆರೆಯುತ್ತಿರುವ ಅಮ್ಮನ ವರ್ತನೆಗಳು ತಾರಕ್ಗೆ ಅಲರ್ಜಿ. ಕಾರಣಾಂತರದಿಂದ ಮದ್ಯವ್ಯಸನಿಯಾಗಿದ್ದಾನೆ. ಒಳ್ಳೇ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ತನ್ನ ಅಮ್ಮನ ಅಹಂಕಾರ ಮುರಿಯಲು ಬಡ ಕುಟುಂಬದ ಮಯೂರಿಗೆ ಮಾಂಗಲ್ಯ ಕಟ್ಟಿಬಿಡುತ್ತಾನೆ. ಅಲ್ಲಿಂದ ಮಯೂರಿ ಜೀವನದ ಹೊಸ ಪಯಣ ಶುರುವಾಗುತ್ತದೆ.
ಕನ್ನಡ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ನಾಯಕನಟ ಬಿಗ್ಬಾಸ್, ಗಾಂಧಾರಿ, ಲಕ್ಷಣ, ಶ್ರೀಗೌರಿ ಖ್ಯಾತಿಯ ಜಗನ್ ʻಮಾಂಗಲ್ಯʼದಲ್ಲಿ ಒಳ್ಳೇ ಕುಡುಕ ಗಂಡನ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿರ್ಮಾಣ ಹಾಗೂ ಪ್ರಧಾನ ನಿರ್ದೇಶನ ಕೂಡ ಅವರದೇ. ಉದಯ ಟಿವಿ ಜೊತೆ ನನ್ನ ಮೊದಲನೇ ಧಾರಾವಾಹಿ ಇದು. ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮೂರು ಪಾತ್ರಗಳನ್ನ ನಿರ್ವಹಿಸುತ್ತ ಇದ್ದೇನೆ. ಕುಡುಕ ತಾರಕ್ ಪಾತ್ರ ಬಹಳ ಸವಾಲಿನದ್ದಾಗಿದೆ. ಇದಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕನಾಗಿ ತುಂಬ ದೊಡ್ಡ ಜವಾಬ್ದಾರಿ ಇದೆ. ಮುತುವರ್ಜಿಯಿಂದ ಆ ಕೆಲಸ ಮಾಡುತ್ತಿದ್ದೇನೆ. ಹಾಗೆಯೇ ನಿರ್ಮಾಪಕನಾಗಿ ಇದೊಂದು ಒಳ್ಳೆಯ ಅನುಭವ. ಉದಯ ಟಿವಿಯ ಪ್ರತಿಷ್ಠಿತ ಶೀರ್ಷಿಕೆ ʻಮಾಂಗಲ್ಯʼ. ಈ ಶೀರ್ಷಿಕೆಯಲ್ಲಿ ಮತ್ತೆ ಧಾರಾವಾಹಿ ಮಾಡುತ್ತಿರುದು ನನ್ನ ಅದೃಷ್ಟ. ಸನ್ಟಿವಿ ನೆಟ್ವರ್ಕ್ ನನಗೆ ಇಂಥ ಅವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದ” ಎನ್ನುತ್ತಾರೆ ಜಗನ್.
ʻಮಾಂಗಲ್ಯʼದಲ್ಲಿ ಒಳ್ಳೇ ಕುಡುಕ ಗಂಡನನ್ನು ಸರಿದಾರಿಗೆ ತರುವ ಹೆಂಡತಿಯ ಪಾತ್ರದಲ್ಲಿ ಖ್ಯಾತ ಕಲಾವಿದೆ ಐಶ್ವರ್ಯ ಪಿಸ್ಸೆ ಕಾಣಿಸಿಕೊಳ್ಳುತ್ತಿದ್ದಾರೆ. ಅನುರೂಪ, ಗಿರಿಜಾ ಕಲ್ಯಾಣ, ಸರ್ವಮಂಗಳ ಮಾಂಗಲ್ಯೆ, ಸುಂದರಿ ಮುಂತಾದ ಕನ್ನಡ ಧಾರಾವಾಹಿಗಳಲ್ಲದೆ, ತೆಲುಗು ಧಾರಾವಾಹಿಗಳು ಹಾಗೂ ಸಂತು ಸ್ಟ್ರೇಟ್ ಫಾರ್ವರ್ಡ್, ಶ್ರೀಕಂಠ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. “ಸುಂದರಿ ಧಾರಾವಾಹಿ ನಂತರ ನನ್ನನ್ನು ಈ ಪಾತ್ರಕ್ಕೆ ಉದಯ ಟಿವಿ ಆಯ್ಕೆ ಮಾಡಿಕೊಂಡಿದ್ದು ಖುಷಿಯ ವಿಚಾರ. ಮಯೂರಿ ಅನ್ನೋ ಜವಾಬ್ದಾರಿಯುತ ಮೃದು ಸ್ವಭಾವದ ಹುಡುಗಿಯ ಪಾತ್ರಕ್ಕೆ ನ್ಯಾಯ ಸಲ್ಲಿಸುವ ವಿಶ್ವಾಸ ಹೊಂದಿದ್ದೇನೆ. ವೀಕ್ಷಕರು ದೀರ್ಘಕಾಲ ʼಮಾಂಗಲ್ಯʼವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ” ಎನ್ನುತ್ತಾರೆ ಐಶ್ವರ್ಯ ಪಿಸ್ಸೆ.
ಸಹ ತಾರಾಗಣದಲ್ಲಿ ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರಿದ್ದಾರೆ. ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದು. ಉದಯ ಟಿವಿ ಜೊತೆ ʼಮಾಂಗಲ್ಯʼದ ಸಂಬಂಧ ಅವಿನಾಭಾವ. ಕನ್ನಡದ ಅತಿ ದೀರ್ಘ ಜನಪ್ರಿಯ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊತ್ತಿದ್ದ ʼಮಾಂಗಲ್ಯʼ ಈ ಹಿಂದೆ ಎಂಟು ವರ್ಷ ಕಾಲ ಪ್ರಸಾರವಾಗಿ ಅಳಿಸಲಾಗದಂಥ ಛಾಪು ಮೂಡಿಸಿತ್ತು. ಅದೇ ಹಾದಿಯಲ್ಲಿ ಹೊಸ ʼಮಾಂಗಲ್ಯʼ ವೀಕ್ಷಕರ ಮನ ಗೆಲ್ಲಲಿದೆ ಎಂಬುದು ಉದಯ ಟಿವಿಯ ಆಶಯ.
ಈಗಾಗಲೇ ಚಲನಚಿತ್ರ ಪ್ರಶಸ್ತಿ ʻಚಿತ್ತಾರ ಸ್ಟಾರ್ ಆವಾರ್ಡ್ಸ್ʼ ಮೂಲಕ ಹೊಸ ಸಂಚಲನ ಹುಟ್ಟಿಸಿರುವ ಉದಯ ಟಿವಿಯಲ್ಲಿ ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಜೊತೆಗೆ ಈ ಹಬ್ಬದ ಋತುವಿನಲ್ಲಿ ಹೊಸ ಬಗೆಯ ವರ್ಣಮಯ ಗ್ರಾಫಿಕ್ಸ್ ಪ್ರಸ್ತುತಿ ಮೂಲಕ ʼಮಾಂಗಲ್ಯʼ ಆರಂಭವಾಗುತ್ತಿದೆ. ಕನ್ನಡದ ಮೊದಲ ಸ್ಯಾಟಲೈಟ್ ವಾಹಿನಿ ಇನ್ನಷ್ಟು ಆಕರ್ಷಕವಾಗುತ್ತಿದೆ. ʻಮಾಂಗಲ್ಯʼ ಇದೇ ಸೆಪ್ಟೆಂಬರ್ 2 ಮಂಗಳವಾರದಿಂದ ಸಂಜೆ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ನಂತರ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 7 ಕ್ಕೆ ಪ್ರಸಾರ ಮುಂದುವರಿಯುತ್ತದೆ.