ಇದು ಅವಳ ಕಥೆ – ಕಷ್ಟಗಳಿಗೆ ಗೋಲಿಮಾರೋ!

6 Min Read

– ಕಂದಮ್ಮಗಳಿಗೆ ಜನ್ಮವಿತ್ತು ಎರಡು ಕಾಲು ಸ್ವಾಧೀನ ಕಳಕೊಂಡಳು‌
– 28 ವರ್ಷಕ್ಕೆ ವೀಲ್ ಚೇರ್ ನಲ್ಲಿ ಬದುಕು – ಗಂಡನ ಡಿವೋರ್ಸ್

ಪವಿತ್ರ ಕಡ್ತಲ
ಡೌಟೇ ಇಲ್ಲ ಬದುಕು ಒಬ್ಬೊಬ್ಬರ ಪಾಲಿಗೆ ಒಂದೊಂದು ಸವಾಲನ್ನು ಕಷ್ಟವನ್ನು ಕೊಟ್ಟುಬಿಡುತ್ತೆ. ಬದುಕು ಹೂವಿನ ಹಾಸಿಗೆ ಅಲ್ವಲ್ಲ. ಕಷ್ಟಗಳನ್ನು ಎದುರಿಸಿ ಸಾಗೋದೆ ಜೀವನ ಅಂತಾ ಪಾಸಿಟಿವಿಟಿ ತುಂಬಿಕೊಂಡು ಸಾಗಬಹುದು. ಆದ್ರೆ ಕೆಲವರ ಬದುಕು ಅದ್ಯಾಗಿರುತ್ತೆ ಅಂದ್ರೆ ನಿತ್ಯವೂ ಹೆಣಗಾಟ. ತೀರದ ಕಷ್ಟ, ಜೀವನಪೂರ್ತಿ ಅಂಗೈಯಲ್ಲಿ ಕರ್ಪೂರವನ್ನು ಹಚ್ಚಿಕೊಂಡು ಬೆಂಕಿಯ ತಾಪಕ್ಕೆ ಒದ್ದಾಡಿ ಬೆಂದುಹೋದ್ರೂ ಬೆಳಕು ಹುಡುಕುವ ಯತ್ನ ಮಾಡಬೇಕು. ಥೇಟು ಜಯಶ್ರೀ ಅನ್ನೋ ಕೊಪ್ಪಳದ ಕನಸುಕಂಗಳ ಯುವತಿಯದ್ದು ಅದೇ ಬದುಕು. ಈ ಕಥೆಯನ್ನು ಕೇಳಿದ್ರೇ ನಿಮ್ಮ ಕಣ್ಣು ತೇವವಾಗುತ್ತೆ. ಈ ಹುಡುಗಿಯ ಕಷ್ಟದ ಬದುಕಿನ ಮುಂದೆ ನಮ್ಮದ್ಯಾವ ಲೆಕ್ಕ ಅನ್ನೋ ನಿಟ್ಟುಸಿರು ಹೊರಬರುತ್ತೆ. ಛೀ ಇದೆಂಥ ಕ್ರೂರ ಬದುಕು ಅನ್ನೋ ಸಣ್ಣದೊಂದು ನೋವಿನ ಯಾತನೆ ಒಡಲಾಳದಲ್ಲಿ ಮೂಡಿಬರುತ್ತೆ. ಜಯಶ್ರಿಯ (Jayashree) ಬದುಕು ಸ್ಫೂರ್ತಿಯನ್ನು ತುಂಬಬಹುದು. ಅವಳ ಕಥೆ ಇಲ್ಲಿದೆ.

ಕಲರ್‌ಫುಲ್ ಬದುಕು ಕನಸು ಕಾಮನಬಿಲ್ಲು
ಆಕೆಯದು 23-24ರ ಹರೆಯ. ಕಣ್ಣತುಂಬಾ ಕನಸಿನ ಹೊಳಪು. ಬದುಕಿನಲ್ಲಿ ಏನಾದ್ರೂ ಸಾಧಿಸುವ ಹುಮ್ಮನಸು. ಜೀವನವೆಲ್ಲ ಯೌವ್ವನದಲ್ಲಿರುವಾಗ ಕಲರ್‌ಫುಲ್ ಇರುತ್ತೆ ಬಿಡಿ. ಕೊಪ್ಪಳದ ಪುಟಾಣಿ ಹಳ್ಳಿಯ ಜಯಶ್ರೀಗೂ ಹಾಗೆ ನಾನು ನನ್ನ ಬದುಕು, ಬದುಕು ಸಾಗಲು ಕೆಲ್ಸ, ಜೊತೆಯಾಗಿ ಸಾಗಲು ಸಂಗಾತಿ. ಪುಟ್ಟದೊಂದು ಗೂಡು ಆ ಗೂಡಿಗೆ ಚಂದದೊಂದು ಹೆಸರು ಹೀಗೆ ಅವಳ ಕನಸಿನ ಪಟ್ಟಿ ದೊಡ್ಡದಿತ್ತು. ಎಂಎಸ್‌ಡಬ್ಲೂ ಮುಗಿದಾಯ್ತು. ಇನ್ನೇನು ಕೆಲ್ಸ ಹುಡುಕಬೇಕು ಅನ್ನುವಷ್ಟರಲ್ಲಿ ಐವರು ಅಣ್ಣಂದಿರ ಮುದ್ದಿನ ಒಬ್ಬಳೇ ಒಬ್ಬ ತಂಗಿಗೆ ಮದುವೆ ಮಾಡುವ ಕನಸು ಅಪ್ಪ ಅಮ್ಮನದ್ದು. ಇಂಡೋನೇಷಿಯಾದಲ್ಲಿ ಡಿಪ್ಲೋಮಾ ಎಂಜಿನಿಯರ್ ಆಗಿದ್ದ ಯುವಕನ ಜೊತೆಗೆ ಗಟ್ಟಿಮೇಳ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು. ಲೈಫ್ ಈಸ್ ಬ್ಯೂಟಿಫುಲ್ ಅನ್ನೋ ಕನವರಿಕೆಯಲ್ಲಿದ್ರು ಜಯಶ್ರೀ.

ಅವಳಿ ಕಂದಮ್ಮಗಳ ಆಗಮನ. ಅನಸ್ತೇಶಿಯಾ ಸೈಡ್‌ಎಫೆಕ್ಟ್ ಬದುಕು ನರಕ
ಮದುವೆ ಚಂದದ ಕುಟುಂಬ ಜಯಶ್ರೀ ಬದುಕಿಗೆ ಕಷ್ಟದ ಸೋಂಕಿರಲಿಲ್ಲ. ಅಲ್ಲಿ ಖುಷಿಯಷ್ಟೇ ಇತ್ತು. ಮದುವೆಯಾಗಿ ಎರಡು ವರ್ಷ ಕಳೆದಿತ್ತು. ಅಷ್ಟರಲ್ಲಿ ಇನ್ನೊಂದು ಸಂಭ್ರಮ. ಅವಳಿ ಕಂದಮ್ಮಗಳು ಭೂಮಿಗೆ ಬಂದಿದ್ವು. ಇಬ್ಬರು ಮಕ್ಕಳ ಮುದ್ದಾಟ ಅವುಗಳ ಆರೈಕೆ ತುಂಟ ನಗು ಅಳುಕೇಕೆ ಬದುಕು ಸಾಗುತ್ತಿತ್ತು. ಹಾಗೆ ಬಿಡುವಿಲ್ಲದ ಇಬ್ಬರು ಮಕ್ಕಳು ಆರೈಕೆ ಮಧ್ಯೆ ಸಣ್ಣದಾಗಿ ಆಯಾಸ ಕಾಲು ನೋವು ಜಯಶ್ರೀಯನ್ನು ಕಾಡತೊಡಗಿತ್ತು. ಛೇ ಇದೆಂಥ ಕಾಡುವ ನೋವು ಅಂತಾ ಕಾಲುನೋವಿಗೆ ಕಂಗೆಟ್ರೂ ಮಕ್ಕಳ ಆರೈಕೆಯಲ್ಲಿ ಅದನ್ನು ಮರೆಯುವ ಪ್ರಯತ್ನ ಮಾಡಿದ್ರು, ಕೆಲವೊಮ್ಮೆ ಥತ್ ಈ ಕಾಲನ್ನು ಕಟ್ ಮಾಡಿಬಿಡಲೇ ಅನ್ನುವಷ್ಟು ಯಮಯಾತನೆ ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಮಕ್ಕಳಿಗೆ ಏಳು ತಿಂಗಳು ಕಳೆದು ಎಂಟು ತಿಂಗಳು ತುಂಬಿದ್ವು ಅಷ್ಟೇ. ಎರಡು ಮಕ್ಕಳಿಗೆ ಹಾಲುಣಿಸಿ ಅವತ್ತು ರಾತ್ರಿ ನಿದ್ದೆಹೋಗಿದ್ದ ಜಯಶ್ರೀ ತನ್ನ ಬದುಕು ಇಲ್ಲಿಂದ ಶಾಶ್ವತವಾಗಿ ಬದಲಾಗುತ್ತೆ ಅನ್ನೋ ಸಣ್ಣ ಅರಿವು ಇರಲಿಲ್ಲ. ಅವತ್ತು ಓಡಾಡಿದ್ದು ಮಕ್ಕಳನ್ನು ತಬ್ಬಿ ಕೂಸುಮರಿ ಮಾಡಿದ್ದೇ ಕೊನೆ. ಮರುದಿನ ಎದ್ದೇಳುವಾಗ ಎರಡು ಕಾಲೂ ಎತ್ತಿ ಮಡಚಿ ಇಡೋಕೆ ಆಗುತ್ತಿರಲಿಲ್ಲ ಕೆಳಗೆ ಇಳಿಸೋಕೂ ಆಗುತ್ತಿರಲಿಲ್ಲ. ಅಯ್ಯೋ ಇದೇನಾಗಿದೆ ಅಂದುಕೊಂಡು ಕಾಲು ಮುಟ್ಟಿದ್ರೆ ಸ್ಪರ್ಶಜ್ಞಾನವೂ ಇರಲಿಲ್ಲ. ಎದೆಯ ಭಾಗದಿಂದ ಕಾಲಿನವರಗೆ ಯಾವ ಸ್ಪರ್ಶವೂ ಇರಲಿಲ್ಲ. ನಿಸ್ತೇಜ ಸ್ಥಿತಿ. ಬಗಲಲ್ಲಿ ಮಲಗಿದ್ದ ಎರಡು ಕಂದಮ್ಮಗಳು ಹಾಲಿಗಾಗಿ ಅಳುತ್ತಿದೆ. ಬಾಗಿ ಎತ್ತಿಕೊಂಡು ಹಾಲುಣಿಸಲು ಆಗದ ಸ್ಥಿತಿ. ಹಸುಗೂಸುವಿನ ಅಳುವಿನೊಂದಿಗೆ ತಾನು ಅತ್ತುಬಿಟ್ರು. ಇನ್ನೇನು ಮಾಡಲಾರದ ಅಸಹಾಯಕತೆ. ಸರಿ ಪತಿ ಅತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಇನ್ನೇನು ಎರಡುಮೂರು ಇದೇ ರೀತಿ ಇರಬಹುದು ಮತ್ತೆ ಸರಿಯಾಗಬಹುದು ಬದುಕು ಅಂತಾ ಅಂದುಕೊಂಡಿದ್ರು ಜಯಶ್ರೀ. ಈ ಬದುಕು ನಾವಂದುಕೊಂಡ ಹಾಗೆ ಅಲ್ವಲ್ಲ. ಇದನ್ನೂ ಓದಿ: ಮಗಳು ಬಿಸಿನೆಸ್ ಮಾಡಲಿ ಅಂತ ಸಿಎಂ, ಡಿಸಿಎಂ ಬಳಿ ಬುದ್ದಿ ಹೇಳಿಸಿದ್ದೆ: ‘ಫೆಮಿನಾ ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮಗಳ ಬಗ್ಗೆ ಸತೀಶ್‌ ಸೈಲ್‌ ಮಾತು

ಗಂಡನ ಡಿವೋರ್ಸ್ ಪೇಪರ್ ಟೇಬಲ್‌ನಲ್ಲಿ
ಎಲ್ಲವೂ ಸರಿಯಿದ್ದಾಗ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ ಜಯಶ್ರೀ ಪತಿ ಮೊದ ಮೊದಲು ಆಸ್ಪತ್ರೆಗೂ ತೋರಿಸಿದ್ರು. ಆದ್ರೇ ವೈದ್ಯರು ಶಾಕ್ ಕೊಟ್ರು. ಡೆಲಿವರಿ ಸಮಯದಲ್ಲಿ ಕೊಟ್ಟ ಅನಸ್ತೇಶಿಯಾ(Anesthesia) ಓವರ್ ಡೋಸ್ ಆಗಿದ್ರಿಂದ ಹೀಗಾಗಿರಬಹುದು. ಇದು ಶಾಶ್ವತವಾಗಿ ಹೀಗೆ ಇರುತ್ತದೆ. ಜೀವನ ಪೂರ್ತಿ ವಾಸಿಯಾಗದ ಸಮಸ್ಯೆ ಇದು ಅಂತಾ ಅಂದುಬಿಟ್ರು. ಆಗಿನ್ನು ಜಯಶ್ರೀಗೆ 27-28 ವಯಸ್ಸು. ಕಂಡ ಕನಸು ಅವಳಿ ಹಸುಗೂಸುಗಳ ಅಳು, ತಾನೆಂದು ಮಕ್ಕಳನ್ನು ಎತ್ತಿಕೊಂಡು ಓಡಾಡಲಾರೆ, ಅವರನ್ನು ಮಡಿಲಲ್ಲಿ ಇಟ್ಟುಕೊಂಡು ಮುದ್ದಿಸಲಾರೆ, ಕೂಸುಮರಿ ಮಾಡಲಾರೆ. ಒಂದು ತುತ್ತು ತಿನ್ನೋ ಕಂದ ಅನ್ನುತ್ತಾ ಮಕ್ಕಳ ಹಿಂದೆ ಓಡಾಡಲಾರೆ ಅಬ್ಬಾ ಇವೆಲ್ಲ ಕಣ್ಣ ಮುಂದೆ ಬಂದು ಇಲ್ಲೆ ಕುಸಿದುಬಿದ್ದು ಬದುಕು ಕೊನೆಗಾಣಿಸಲೇ ಅನ್ನುವ ಯೋಚನೆಯೂ ಬಂತು. ಬೇಡ ಕಂದಮ್ಮ ನನ್ನ ಗಂಡ ಜೊತೆಗಿದ್ದಾರೆ ಹೇಗೆ ಇದ್ರೂ ಬದುಕು ಎದುರಿಸ್ತೀನಿ ಅಂತಾ ಜಯಶ್ರೀ ನಿಸ್ತೇಜ ಕಾಲಿನ ಯಾತನೆಯ ನೋವಿನಲ್ಲೂ ಬದುಕಿನತ್ತ ಮುಖಮಾಡಿದ್ರು. ಅತ್ತ ತವರಿನಲ್ಲಿ ಅಮ್ಮನನ್ನು ಕಳೆದುಕೊಂಡಿದ್ದ ಜಯಶ್ರೀಯನ್ನು ಕೆಲ ದಿನ ನಮ್ಮ ಜೊತೆಗೆ ಇರಲಿ ಅಂತಾ ಅಣ್ಣಂದಿರು ಕರೆದುಕೊಂಡು ಹೋದ್ರು. ಇದೆಲ್ಲ ನಡೆದು ವರ್ಷವಾಗಿರಬೇಕು. ಅಷ್ಟರಲ್ಲಿ ತವರು ಮನೆಗೆ ಬಂದ ಗಂಡ ದಿಢೀರ್ ಅಂತಾ ಮಲಗಿದ್ದ ಬೆಡ್ ಬಳಿ ಡಿವೋರ್ಸ್ ಪೇಪರ್ ಕೈಗಿಟ್ಟುಬಿಟ್ಟ.

ಅವಳಿ ಮಕ್ಕಳು ದೂರವಾದ್ರು. ಅತ್ತ ಪತಿಯೂ ಇಲ್ಲ
ಹೂ ಕೊಡಲಾರೆ ನಾನು ಡಿವೋರ್ಸ್ ಅಂತಾ ಜಯಶ್ರೀ ಒಂದೇ ಸಮನೆ ಶಾಕ್‌ಗೆ ಒಳಗಾಗಿ ರಂಪಾಟ ಮಾಡಿದ್ರು. ಆದ್ರೇ ಕಟುಕ ಪತಿ ಇದ್ಯಾವುದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ನಿನ್ನ ಜೊತೆ ನಾನ್ಯಾಗೆ ಬದುಕಲಿ ನನ್ನ ಕನಸನ್ನು ಕೊಂದುಕೊಂಡು, ನಿನ್ನ ಅಣ್ಣಂದಿರಿಗೆ ನನ್ನ ತರನೇ ಆಗಿದ್ರೇ ಅವ್ರು ವರ್ತನೆ ಹೇಗಿರುತ್ತಿತ್ತು ಅಂತಾ ಪ್ರಶ್ನೆ ಇಟ್ಟ. ಅರೆ ಸಪ್ತಪದಿ ತುಳಿಯುವಾಗ ಕೊಟ್ಟ ಭರವಸೆ ಕಷ್ಟ ಸುಃಖ ಏನೇ ಇದ್ರೂ ಜೊತೆಗಿರುವ ಭರವಸೆ ಎಲ್ಲಿ ಹೋಯಿತು. ಜಯಶ್ರೀ ಪ್ರಶ್ನೆಗೆ ಪತಿ ಬಳಿ ಉತ್ತರವಿರಲಿಲ್ಲ. ಕೇವಲ ಕಣ್ಣಲ್ಲಿ ನಿನ್ನ ಜೊತೆ ಬದುಕಲಾರೆ ಅನ್ನುವ ತಿರಸ್ಕಾರವಿತ್ತಷ್ಟೇ. ಕುಸಿದುಹೋದ ಜಯಶ್ರೀ ನಾನು ಸಾಯುತ್ತೇನೆ ಎನ್ನುವ ಗಟ್ಟಿನಿರ್ಧಾರಕ್ಕೆ ಬಂದು ವಿಷ ಕುಡಿಯಲು ಮುಂದಾದ್ರು. ಭಯಗೊಂಡು ಪತಿ ಕಸಿದುಕೊಂಡು ವಾಪಾಸು ಹೊರಟು ಹೋದ್ರು. ಕೊನೆಗೆ ಕೋರ್ಟ್ ಮೂಲಕ ಡಿವೋರ್ಸ್ ಪೇಪರ್ ಕಳಿಸಿದ ಪತಿಯ ಗಟ್ಟಿ ನಿರ್ಧಾರ ಕಂಡು ತಾನು ಮನಸು ಗಟ್ಟಿಮಾಡಿಕೊಂಡ್ರು. ಅತ್ತ ಪತಿ ಇಬ್ಬರು ಅವಳಿ ಮಕ್ಕಳನ್ನು ಕರೆದುಕೊಂಡು ಹೋದ. ಮಕ್ಕಳನ್ನಾದ್ರೂ ಜೊತೆಗಿರಲಿ ಅಂತಾ ಬೇಡಿಕೊಂಡ್ರು. ಆದ್ರೇ ನಿನ್ನನ್ನೇ ನೋಡಿಕೊಳ್ಳಲು ಸಾಧ್ಯವಾಗದೇ ಮಕ್ಕಳನ್ನು ಹೇಗೆ ಸಾಕ್ತೀಯಾ ಅನ್ನುವ ಪ್ರಶ್ನೆಗೆ ಉತ್ತರವಿಲ್ಲದೇ ಹೆತ್ತೊಡಲಿಗೆ ಸಂಕಟವನಿಸಿದ್ರೂ ಮೌನವಿದ್ರು. ಕರುಣೆಯಿಲ್ಲದ ಪತಿ ಮಕ್ಕಳನ್ನು ಕರೆದುಕೊಂಡು ತಿರುಗಿನೋಡದೇ ಹೊರಟುಬಿಟ್ಟ. ಅತ್ತ ಸುಮಾರು ಹತ್ತು ವರ್ಷ ನೋಡಿಕೊಂಡ ಅಣ್ಣಂದಿರಿಗೂ ಸಾಕೋದು ಕಷ್ಟ ಅನಿಸಿ ಜಯಶ್ರೀಗೆ ನಿನ್ನ ಬದುಕು ನಿನಗೆ ಅಂದುಬಿಟ್ರು.

ಝೊಮ್ಯಾಟೋ ಉದ್ಯಮ, ರೊಟ್ಟಿ ಉದ್ಯಮ
ಒಂಟಿ ಕಡು ಒಂಟಿತನದ ಬದುಕು ಇನ್ನೊಂದಡೆ ಸ್ವಾಧೀನವಿಲ್ಲದ ಕಾಲು. ಎಲ್ಲರೂ ಕೈಬಿಟ್ಟು ನಡು ಬೀದಿಯಲ್ಲಿ ಬದುಕು ನಿಂತಿದೆ. ಬಹುಶಃ ಈಕೆಯ ಸ್ಥಾನದಲ್ಲಿ ಬೇರೆ ಯಾರೇ ಇದ್ರೂ ಈ ಪರಿ ಕಷ್ಟ ಬಂದಿದ್ರೇ ಬದುಕಿಗೆ ಕೊನೆಹಾಡುತ್ತಿದ್ರೋ ಏನೋ. ಜಯಶ್ರೀ ಹಾಗೆ ಮಾಡಲಿಲ್ಲ. ಅಪ್ಪನ ಹೊಲದಲ್ಲಿಯೇ ಪುಟ್ಟದೊಂದು ಶೆಡ್ ಹಾಕಿಕೊಂಡ್ರು. ಅವರಿವರು ಸಹಾಯವನ್ನು ಮಾಡಿದ್ರು. ಕೊನೆಗೆ ಸಮೂಹ ಸಾಮರ್ಥ ಎನ್‌ಜಿಓ ಸಹಾಯದೊಂದಿಗೆ ಕೊಂಚ ಪಿಸಿಯೋ ಮಾಡಿಸಿಕೊಂಡು ತಮ್ಮ ಕಾಲನ್ನು ತಾವು ಮಡಚಿಕೊಳ್ಳುವಷ್ಟು ಶಕ್ತಿಯನ್ನು ಸಂಪಾದಿಸಿಕೊಂಡ್ರು. ಕೊನೆಗೆ ಬೆಂಗಳೂರಿಗೆ ಬಂದು ಆರೇಳು ತಿಂಗಳು ಝೊಮ್ಯಾಟೋದಲ್ಲಿ ಕೆಲ್ಸ ಮಾಡಿ ವಿಶೇಷ ಚೇತನರು ಓಡಾಡು ವಾಹನ ಖರೀದಿಸಿದ್ರು. ಅದ್ಯಾಕೋ ಏನೋ ಧೈರ್ಯ ಬಂತು. ದೇವರ ಮೇಲೆ ಭಾರ ಹಾಕಿ 75 ಸಾವಿರದ ರೊಟ್ಟಿಮೆಷಿನ್ ಖರೀದಿಸಿದ್ರು. ಇಬ್ಬರು ಸಹಾಯಕ್ಕಾಗಿ ಕೆಲ್ಸದವರನ್ನು ಇಟ್ಟುಕೊಂಡು ಉತ್ತರ ಕರ್ನಾಟಕ ಸ್ಪೆಷಲ್ ರೊಟ್ಟಿ ತಯಾರು ಮಾಡುತ್ತಿದ್ದಾರೆ. ಮದುವೆ ಸಮಾರಂಭದ ಆರ್ಡರ್‌ಗಳು ಬರುತ್ತೆ. ಜೊತೆಗೆ ಬಿಲ್ವಿದ್ದೆಯನ್ನು ವೀಲ್ ಚೇರ್ ನಲ್ಲಿಯೇ ಕೂತು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಕ್ರೀಡೆಯಲ್ಲಿ ಏನಾದ್ರೂ ಸಾಧನೆ ಮಾಡಲೇಬೇಕು ಅನ್ನುವ ಉತ್ಸಾಹದಲ್ಲಿದ್ದಾರೆ. ನಾವೆಲ್ಲ ಕೈ ಕಾಲು ಸರಿ ಇದ್ದು ಸಮಸ್ಯೆಗಳು ಬಂದಾಗ ಜಗತ್ತೆ ತಲೆಮೇಲೆ ಬಿದ್ದವರಂತೆ ಆಡುವಾಗ ಆಕೆ ಅಲ್ಲಿ ವೀಲ್‌ಚೇರ್ ನಲ್ಲಿ ಕೂತು ತನ್ನ ಬದುಕನ್ನು ತನ್ನ ಕಷ್ಟಗಳನ್ನು ತಾನೊಬ್ಬಳೇ ಎದುರಿಸಿ ಸಂಕಷ್ಟಕ್ಕೆ ಗೋಲಿಮಾರೋ ಎಂಬಂತೆ ನಗುನಗುತ್ತಾ ಬದುಕುತ್ತಿದ್ದಾರೆ.

Share This Article