ಕಾಂತಾರ ಬಿಡುಗಡೆ ಹೊತ್ತಲ್ಲಿ ಭಾಷೆಯ ವಿಚಾರಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಂಧ್ರ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾನುವಾರ ಹೈದ್ರಾಬಾದ್ನಲ್ಲಿ ನಡೆದ ಪ್ರೀ-ರಿಲೀಸ್ ಇವೆಂಟ್ನಲ್ಲಿ ವೇದಿಕೆ ಮೇಲೆ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಜನರಿಗೆ ರಿಷಬ್ “ನನ್ನ ಮಾತು ಅರ್ಥವಾಗದಿದ್ದರೆ ತಾರಕ್ ಟ್ರಾನ್ಸ್ಲೇಟ್ ಮಾಡ್ತಾರೆ” ಎಂದು ನಗುತ್ತಾ ಹೇಳಿದ್ದರು.
ರಿಷಬ್ಗೆ ಸರಿಯಾಗಿ ತೆಲುಗು ಭಾಷೆ ಮಾತನಾಡಲು ಬರದೆ ಇರುವುದಕ್ಕೆ ಕನ್ನಡದಲ್ಲಿ ಮಾತನಾಡಿದ್ದರು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವರು ರಿಷಬ್ರನ್ನ ಟ್ರೋಲ್ ಮಾಡಲಾರಂಭಿಸಿದ್ರು. ಬೇರೆಲ್ಲಾ ಸ್ಥಳದಲ್ಲಿ ಆಯಾ ಭಾಷೆಯಲ್ಲಿ ಮಾತನಾಡುವ ರಿಷಬ್ ತೆಲುಗು ನಾಡಿದಲ್ಲಿ ತೆಲುಗು ಭಾಷೆ ಮಾತನಾಡದೇ ಇರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರದ ಕುರಿತು ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ
ಮುಂಬೈನಲ್ಲಿ ಹಿಂದಿ ಭಾಷೆ ಮಾತನಾಡುವ ರಿಷಬ್ ಹೈದ್ರಾಬಾದ್ನಲ್ಲಿ ತೆಲುಗು ಮಾತನಾಡಿಲ್ಲವೆಂದು ವಿರೋಧ ಬಂದ ಹಿನ್ನೆಲೆ ಸ್ಪಷ್ಟನೆ ಕೊಟ್ಟಿದ್ದಾರೆ. “ನನ್ನ ಭಾಷೆ ಕನ್ನಡ , ನಾನು ಹೆಮ್ಮೆಯ ಕನ್ನಡಿಗ, ನಾನು ಕನ್ನಡದಲ್ಲೇ ಯೋಚಿಸುವುದು ಹೀಗಾಗಿ ಕನ್ನಡ ಮಾತಾಡ್ತೀನಿ, ಮಾತನಾಡಲು ಬರದೇ ಇರೋ ಭಾಷೆಯನ್ನ ಮಾತನಾಡಿ ಆ ಭಾಷೆಗೆ ಅಗೌರವ ತೋರಿಸುವುದು ಬೇಡವೆಂದು ಕನ್ನಡದಲ್ಲಿ ಮಾತನಾಡಿದ್ದೇನೆ” ಎಂದಿದ್ದಾರೆ ರಿಷಬ್. ಜೊತೆಗೆ ಎಲ್ಲ ಭಾಷೆಯನ್ನೂ ಕಲಿಯೋದಕ್ಕೆ ಖುಷಿ ಇದೆ. ಇತ್ತೀಚಿಗೆ ಬೇರೆ ಬೇರೆ ಭಾಷೆಯಲ್ಲಿ ಸಂದರ್ಶನ ಕೊಡುತ್ತಾ ಬಂದಿರೋದ್ರಿಂದ ಎಲ್ಲಾ ಭಾಷೆಯನ್ನ ಈಗೀಗ ಕಲಿಯುತ್ತಿದ್ದೇನೆ”. ಎಂದು ಮುಂಬೈನಲ್ಲಿ ಹೇಳುವ ಮೂಲಕ ತೆಲುಗು ಭಾಷೆ ಮಾತನಾಡದಿರುವ ವಿವಾದಕ್ಕೆ ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ.