ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

Public TV
3 Min Read

ಉಡುಪಿ: ಪರೇಶ್ ಮೇಸ್ತಾ ಸಾವಿನ ಪ್ರಕರಣದ ಪ್ರಾಥಮಿಕ ವರದಿ ನೀಡಿದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯರ ಮೇಲೆ ಫೇಸ್ ಬುಕ್- ವಾಟ್ಸಪ್‍ನಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಶಂಕರ್ ಬಕ್ಕಣ್ಣನವರ್ ಸುಳ್ಳು ವರದಿ ಕೊಟ್ಟಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯರು ರಿಪೋರ್ಟ್ ಕೊಟ್ಟ ನಂತರ ಕಾಣೆಯಾಗಿದ್ದಾರೆ. ಸರ್ಕಾರದ ಒತ್ತಡದಿಂದ ಅವರು ಈ ವರದಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಕೆಎಂಸಿ ವೈದ್ಯಕೀಯ ಕಾಲೇಜು ಇದನ್ನು ಅಲ್ಲಗಳೆದಿದೆ. ವೈದ್ಯರು ರಜೆಯ ಮೇಲೆ ತೆರಳಿದ್ದಾರೆ. ಈ ತಿಂಗಳಲ್ಲಿ ರಜೆ ತೆಗೆದುಕೊಳ್ಳುವುದಾಗಿ ಮೊದಲೇ ಹೇಳಿದ್ದರು. ಮನೆಗೆ ತೆರಳಿದ್ದಾರೆ. ಡಿಸೆಂಬರ್ 15ಕ್ಕೆ ಕಾಲೇಜಿಗೆ ವಾಪಾಸಾಗುತ್ತಾರೆ ಎಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಶೋಭಾ ವಾಗ್ದಾಳಿ:
ಮೇಸ್ತ ಸಾವಿನ ಕುರಿತು ಗೃಹ ಸಚಿವರು ನೀಡಿರುವ ಹೇಳಿಕೆಗೆ ಬೇಸರ ವ್ಯಕ್ತ ಪಡಿಸಿದ ಅವರು ಯುವಕನ ಸಾವಿನ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದರು. ಮಣಿಪಾಲ ಆಸ್ಪತ್ರೆಗೆ ಉತ್ತಮ ಹೆಸರಿದ್ದು, ಆಡಳಿತ ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹಾಕಿ ಈ ವರದಿಯನ್ನು ಸಿದ್ಧಪಡಿಸಿದೆ. ಇದಕ್ಕೆ ಮುಖ್ಯ ಮಂತ್ರಿಗಳು ಹಾಗೂ ಗೃಹ ಸಚಿವರು. ನಾನು ಆಸ್ಪತ್ರೆಯ ವೈದ್ಯರ ಜೊತೆ ಚರ್ಚೆ ಮಾತನಾಡುತ್ತೇನೆ. ನಿಜಾಂಶ ವರದಿ ನೀಡಲು ಮನವಿ ಮಾಡುತ್ತೇನೆ. ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಸರ್ಕಾರ ಬಿಜೆಪಿ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸುತ್ತಿದೆ, ಹತ್ಯೆ ನಡೆದ ದಿನ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲೇ ಇದ್ದರು. ಆದರೆ ಪೊಲೀಸರಿಗೆ ಗಲಭೆ ನಡೆದ ಮಾಹಿತಿ ಇದ್ದರೂ ಸಿಎಂ ಈ ಕುರಿತು ಸಭೆ ನಡೆಸಿ ಶಾಂತಿ ಕಾಪಾಡಲು ಕ್ರಮವನ್ನು ಕೈಗೊಳ್ಳಲು ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಆರೋಪಿಸಿದರು. ( ಇದನ್ನೂ ಓದಿ: ಬಿಜೆಪಿಯವ್ರು ಮನೆಯಲ್ಲಿದ್ರೆ ರಾಜ್ಯ ಶಾಂತವಾಗಿರುತ್ತೆ – ಸಿಎಂ )

ಘಟನೆ ಕುರಿತು ತನಿಖೆ ನಡೆಸಲು ಇದೇ ತಿಂಗಳ 15 ರಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಸಂಸ್ಥೆಗೆ ತನಿಖೆಗೆ ನೀಡಲು ಮನವಿ ಮಾಡಿಕೊಳ್ಳುತ್ತೇನೆ. ಪೊಲೀಸರು ಮಣಿಪಾಲ ಆಸ್ಪತ್ರೆಗೆ 19 ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಈ ಪ್ರಶ್ನೆಗಳನ್ನು ಕೇಳಲು ಯಾರು ಹೇಳಿದ್ದರು? ಸರ್ಕಾರವೇ ಪೊಲೀಸರ ಮೂಲಕ ಮಾಧ್ಯಮಗಳಿಗೆ ಈ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯ ದೇಶದ್ರೋಹಿ ಸಂಘಟನೆ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯೇ ಕಾರಣ. ಈ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಅಗ್ರಹಿಸಿದರು.

ಇದೇ ವೇಳೆ ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಪಕ್ಷ ಕಾರಣವಲ್ಲ. ನಾವು ಶಾಂತಿಯಿಂದ ಹೋರಾಟ ನಡೆಸಲು ಮಾತ್ರ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿ ಮನವಿ ಸಲ್ಲಿಸಿದ್ದೇವೆ. ಅನುಮತಿ ಸಿಗದೇ ಇದ್ದರೆ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.  ( ಇದನ್ನೂ ಓದಿ: Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ )

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಭೆ ಹೆಚ್ಚಾದಾಗ ಪೊಲೀಸರು 19 ಪ್ರಶ್ನೆಗಳನ್ನು ಕೇಳಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಸಂಸ್ಥೆಯಿಂದ ಉತ್ತರ ಸಿಕ್ಕಿತ್ತು. ಉತ್ತರಗಳಿಂದ ಸಾಮಾಜಿಕ ಜಾಲತಾಣದ ನೆಟ್ಟಿಗರು ಸಂತೃಪ್ತರಾಗದ ಹಿನ್ನೆಲೆಯಲ್ಲಿ ಟ್ರೋಲ್ ಆರಂಭಿಸಿದ್ದರು. ಫೇಸ್ ಬುಕ್ ವಾಟ್ಸಪ್ ಪರೇಶ್ ಮೇಸ್ತಾ ಸಾವಿಗೆ ಸಂಬಂಧಿಸಿದ ಪ್ರಾಥಮಿಕ ವರದಿಗೆ ಆಕ್ಷೇಪಗಳು ವ್ಯಕ್ತವಾಗಿದೆ. ಆದರೆ ಕೆಎಂಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಗ್ಗೆ ಅಧಿಕೃತವಾಗಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *