ಮೈಸೂರು: ವ್ಯಕ್ತಿಯೊಬ್ಬ ಪತ್ನಿ ಹಾಗೂ ಮಗಳನ್ನು ಕೊಂದು ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ವಿಜಯನಗರ 4ನೇ ಹಂತದಲ್ಲಿ ನಡೆದಿದೆ.
ಸವಿತಾ (39) ಮತ್ತು ಸಿಂಚನಾ (10) ಕೊಲೆಯಾದ ದುರ್ದೈವಿಗಳು. ಆರೋಪಿ ಪತಿ ಪ್ರಜ್ವಲ್ ನಿಂದ ಈ ಕೃತ್ಯ ನಡೆದಿದೆ. ಎರಡು ದಿನಗಳ ಹಿಂದೆಯೇ ಆರೋಪಿ ಈ ಕೊಲೆ ಮಾಡಿದ್ದು, ಗುರುವಾರ ರಾತ್ರಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆರೋಪಿ ಪ್ರಜ್ವಲ್ ಎರಡು ದಿನದ ಹಿಂದೆ ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಕೊಂದಿದ್ದಾನೆ. ಎರಡು ದಿನ ಮನೆಯಲ್ಲಿಯೇ ಇದ್ದು, ಹೊರಗಡೆ ಬಂದಿಲ್ಲ. ಬಳಿಕ ಗುರುವಾರ ರಾತ್ರಿ ತಾನು ಸಹ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇದನ್ನು ನೆರೆಹೊರೆಯವರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿಲ್ಲ.
ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.