ನವದೆಹಲಿ: ನಟ ಕಮಲ್ ಹಾಸನ್ (Kamal Haasan) ಅಭಿನಯದ ’ಥಗ್ ಲೈಫ್’ (Thug Life) ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮವನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು ‘ಗೂಂಡಾಗಳ ಗುಂಪುಗಳು’ ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಕನ್ನಡ ತಮಿಳಿನಿಂದ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಇತ್ತೀಚೆಗೆ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಕರೆಗಳು ಬಂದಿದ್ದವು. ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಮಸ್ಯೆಯನ್ನು ಪರಿಹರಿಸಲು ನಟ ಕ್ಷಮೆಯಾಚಿಸಬೇಕೆಂಬ ಸಲಹೆ ನೀಡಿತ್ತು.
ಈ ಸಲಹೆ ವಿರುದ್ಧ ನಿರ್ಮಾಪಕರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠ ಹೈಕೋರ್ಟ್ ಸಲಹೆಯನ್ನು ಪ್ರಶ್ನಿಸಿತು. ಸಂಘಟನೆಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವನ್ನು ಟೀಕಿಸಿತು.
ಕಾನೂನಿನ ನಿಯಮವು ಮೇಲುಗೈ ಸಾಧಿಸಬೇಕು ಎಂದ ಸುಪ್ರೀಂ ಕೋರ್ಟ್ (Supreme Court), ನಾವು ಇಂತಹ ಬೆಳವಣಿಗೆ ಅನುಮತಿಸಲು ಸಾಧ್ಯವಿಲ್ಲ. ಕಾನೂನಿನ ನಿಯಮವು ಯಾವುದೇ ವ್ಯಕ್ತಿಗೆ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡಬೇಕೆಂದು ಹೇಳುತ್ತದೆ. ಚಿತ್ರಮಂದಿರಗಳು ಸುಟ್ಟುಹೋಗುತ್ತವೆ ಎಂಬ ಭಯದಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಜನರು ಬಂದು ಚಿತ್ರವನ್ನು ನೋಡಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿತು.
ಒಬ್ಬರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದ ಮಾತ್ರಕ್ಕೆ ಆ ಸಿನಿಮಾವನ್ನು ನಿಷೇಧಿಸಬೇಕು ಎಂದರ್ಥವಲ್ಲ. ಸಿಬಿಎಫ್ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ಕಾನೂನಿನ ನಿಯಮವಿದೆ. ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ತಡೆಯಲು ಜನಸಮೂಹಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ ಏನೋ ತಪ್ಪಿದೆ. ಒಬ್ಬ ವ್ಯಕ್ತಿ ಹೇಳಿಕೆ ನೀಡುತ್ತಾನೆ ಮತ್ತು ಜನರು ಅದನ್ನು ಸುವಾರ್ತೆಯ ಸತ್ಯವೆಂದು ಭಾವಿಸುತ್ತಾರೆ. ಚರ್ಚೆ ನಡೆಯಲಿ! ಬೆಂಗಳೂರಿನ ಪ್ರಬುದ್ಧ ಜನರು ಕಮಲ ಹಾಸನ್ ಏಕೆ ತಪ್ಪು, ಅವರು ಹೇಳುವುದು ಅಸಂಬದ್ಧ ಎಂದು ಹೇಳಲಿ.
ಕರ್ನಾಟಕ ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ಗೆ ವರ್ಗಾಯಿಸಲು ನಿರ್ದೇಶನ ನೀಡಿ, ಬುಧವಾರದೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು. ಈ ವಿಷಯವನ್ನು ಗುರುವಾರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಹೇಳಿದೆ.