– ಘೋಷಣೆ ಮಾಡಿದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ
– ಸೆಪ್ಟೆಂಬರ್ ಸಮೀಕ್ಷಾ ವರದಿಯ ಬಗ್ಗೆ ಮಾತೇ ಆಡುತ್ತಿಲ್ಲ
ಬೆಂಗಳೂರು: ಅಹಿಂದ (Ahinda) ವರ್ಗದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ (Siddaramaiah) ಅವರು ಅಹಿಂದ ವರ್ಗಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದರೂ ಜನಸಾಮಾನ್ಯರ ಯಾವುದೇ ವರ್ಗಕ್ಕೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ ಎಂದು ಶಾಸಕ ವಿ ಸುನಿಲ್ ಕುಮಾರ್ (Sunil Kumar) ವಾಗ್ದಾಳಿ ನಡೆಸಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸಮಾರಂಭದಲ್ಲಿ ನಾನು ಅಹಿಂದದ ಹಿತವನ್ನು ಕಾಪಾಡುತ್ತೇನೆ, ಅಹಿಂದ ವರ್ಗವನ್ನು ಉಳಿಸುತ್ತೇನೆ ಎಂದು ಹೇಳುತ್ತಾ ಬಂದ ಮುಖ್ಯಮಂತ್ರಿಗಳು ನಿರಂತರವಾಗಿ ಅಹಿಂದ ವರ್ಗಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ತಮ್ಮ ರಾಜಕೀಯ ಭಾಷಣಕ್ಕೆ ಅಹಿಂದವನ್ನು ಬಳಸಿಕೊಂಡ ಸಿಎಂ ಆ ವರ್ಗಕ್ಕೆ ಯಾವುದೇ ರೀತಿ ನ್ಯಾಯ ಕೊಡಲಿಲ್ಲ. ಈ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷದ ಯೋಜನೆಯಲ್ಲಿ ಹಿಂದುಳಿದ ವರ್ಗದ ಬೇರೆ ಬೇರೆ ನಿಗಮಗಳಿಗೆ ಘೋಷಣೆ ಮಾಡಿದ ಹಣವನ್ನು ಬಿಡುಗಡೆ ಮಾಡಲಿಲ್ಲ. ಇದನ್ನು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ. ಘೋಷಣೆಯಲ್ಲಿ ದೊಡ್ಡ ಪ್ರಚಾರ ಪಡೆಯುವ ಸರ್ಕಾರ, ನಿಗಮದ ಹತ್ತಾರು ಯೋಜನೆಗಳಿಗೆ ಅನುದಾನ ಕಡಿತ ಮಾಡಿದೆ. ಸಿದ್ದರಾಮಯ್ಯ ಅವರು ಘೋರ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು: ಎಬಿವಿಪಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ನಾನು ದೊಡ್ಡ ಸಹಾಯ ಮಾಡಿದೆ ಎಂದು ಹೇಳುತ್ತಾರೆ. ಅಹಿಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಮಾಡುವ ಕಾಂಗ್ರೆಸ್ ಅನ್ನು, ಈ ವರ್ಗದ ಹಿತ ಕಾಪಾಡದ ಸರ್ಕಾರವನ್ನು ಈ ಬಾರಿ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: Census 2027 | ಈ ಸುದ್ದಿ ಓದಿ ಮನೆಯಲ್ಲೇ ಕುಳಿತೇ 15 ನಿಮಿಷದ ಒಳಗಡೆ ನಿಮ್ಮ ವಿವರವನ್ನು ಭರ್ತಿ ಮಾಡಿ!
ಸಮೀಕ್ಷಾ ವರದಿಗಳು ಮೂಲೆಗುಂಪು
ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಧುಸೂಧನ್ ನಾಯಕ್ ವರದಿ ಮೂಲೆ ಗುಂಪಾಗಿದೆ. ಸೆಪ್ಟೆಂಬರ್ ನಲ್ಲಿ ಸಮೀಕ್ಷೆ ಮಾಡಿ ಒಂದು ತಿಂಗಳಲ್ಲಿ ವರದಿ ನೀಡುತ್ತೇವೆ ಎಂದಿದ್ದರು. ಈಗ ಏಪ್ರಿಲ್ ಬಂದಿದ್ದು ಸಿಎಂ ಅವರು ಸಮೀಕ್ಷೆಯ ವರದಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದೇ ರೀತಿ 2014 ರ ಕಾಂತರಾಜು ವರದಿ, 2025 ರ ಜಯಪ್ರಕಾಶ್ ಹೆಗ್ಡೆ ವರದಿಗಳನ್ನು ಕಾರಣ ಇಲ್ಲದೇ ಕಸದ ಬುಟ್ಟಿಗೆ ಹಾಕಿದರು. ಅದೇ ರೀತಿ ಪರಿಸ್ಥಿತಿ ಮಧುಸೂಧನ್ ನಾಯಕ್ ವರದಿಗೂ ಬರಲಿದೆ. ರಾಜ್ಯದ ಜನರ 500 ಕೋಟಿ ರೂ. ತೆರಿಗೆ ಹಣ ಬಳಸಿ ಈ ಸಮೀಕ್ಷೆ ಮಾಡಿದ್ದರು. ಬಜೆಟ್ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾವು ಈ ಬಗ್ಗೆ ಕೇಳಿದರೂ ಮೌನಜಾಣ ಮಾಡಿದ್ದಾರೆ. ಈ ಮೂಲಕವೂ ರಾಜ್ಯದ ಹಿಂದುಳಿದ ವರ್ಗಕ್ಕೆ ದೊಡ್ಡ ಪ್ರಮಾಣ ಅನ್ಯಾಯ ಮಾಡಲಾಗಿದೆ ಎಂದರು.
ಸದ್ದಿಲ್ಲದೆ ಹೊರ ಗುತ್ತಿಗೆ ನೌಕರರನ್ನು ಕೈ ಬಿಡುವ ಹುನ್ನಾರವನ್ನು ಈ ಸರ್ಕಾರ ನಡೆಸಿದೆ. ಆಡಳಿತದಲ್ಲಿ ಗೊಂದಲ ಆಗಿದೆ. ಎರಡೂ ಮುಕ್ಕಾಲು ಲಕ್ಷ ಖಾಲಿ ಹುದ್ದೆ ಭರ್ತಿ ಮಾಡದೇ ಮೀನಮೇಷ ಏಣಿಸುತ್ತಿದೆ. 25 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದರು. ಅದಕ್ಕೂ ಹಣ ಇಲ್ಲ ಎಂದರು.
ಬಿಪಿಲ್ ಕಾರ್ಡ್ಗಳನ್ನು ರದ್ದು ಮಾಡಿದ್ದಾರೆ. ಬೇರೆ ಬೇರೆ ನೆಪ ಹೇಳಿ ಪಿಂಚಣಿ ಕಡಿತ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಸರ್ಕಾರ ಇದನ್ನೆಲ್ಲ ಮಾಡುತ್ತಿದೆ. ಬಿಜೆಪಿ ಸರ್ಕಾರದ ಎಲ್ಲಾ ಯೋಜನೆ ಕೈ ಬಿಟ್ಟು. ಗ್ಯಾರಂಟಿಯೇ ಅಭಿವೃದ್ಧಿ ಎಂಬ ಭಮೆಯಲ್ಲಿ ಈ ಸರ್ಕಾರ ಇದೆ ಸಿಟ್ಟು ಹೊರಹಾಕಿದರು.

