ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು – ಸಿ.ಎನ್.ಅಶ್ವಥ್ ನಾರಾಯಣ ಕರೆ

Public TV
3 Min Read

ಬೆಂಗಳೂರು: ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಿದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು, ಉದ್ಯಮಶೀಲತೆಯ ಸ್ಫೂರ್ತಿ ಹೊಂದಿರುವವರು ಎಂದು ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ (Ashwath Narayan) ಹೇಳಿದರು.

ಪ್ರಾದೇಶಿಕ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ರಚಿಸಲಾದ ವೇದಿಕೆ “ಫರ್ಸ್ಟ್ ಸರ್ಕಲ್” (First Circle) ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಬಿಸಿನೆಸ್ ನೆಟ್‌ವರ್ಕಿಂಗ್ ಎಕ್ಸ್‌ಪೋ ಹಾಗೂ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

ಕರ್ನಾಟಕದ ಬೆಂಗಳೂರು ಇಡೀ ವಿಶ್ವಕ್ಕೆ ಆವಿಷ್ಕಾರದ ನಾಡು ಎನಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯಭೂಮಿ, ಭರವಸೆಯ ನಾಡಿನಲ್ಲಿ ನಾವು ಇದ್ದೇವೆ. ಇಂತಹ ಅವಕಾಶಗಳ ನಾಡಿನ ಶಕ್ತಿಯನ್ನು ಅರಿಯಬೇಕು. ಉದ್ಯಮಿಗಳಾಗಿ ಯಶಸ್ಸು ಗಳಿಸಿದ ನಂತರ ಅದನ್ನು ಸಮಾಜಕ್ಕೆ ವಾಪಸ್ ಕೊಡಬೇಕು. ಹೊಸ ಐಡಿಯಾಗಳನ್ನು ಹೊಂದಿರುವ ಉದ್ಯಮಿಗಳನ್ನು ಸದಾ ನಾನು ಬೆಂಬಲಿಸುತ್ತೇನೆ. ನನ್ನ ಕರ್ತವ್ಯವೇ ಅವರನ್ನು ಸನ್ನದ್ಧರನ್ನಾಗಿಸುವುದು, ಅವರಿಗೆ ಸೌಲಭ್ಯ ಒದಗಿಸುವುದು. ನಮ್ಮ ಜೊತೆಯಲ್ಲಿರುವ ನೂರಾರು ಮಂದಿ ಇಂದು ಉದ್ಯಮಿಗಳಾಗಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಬೆಂಬಲವಷ್ಟೇ. ನಾವು ಉದ್ಯಮಿಗಳಾಗಲು ಬಯಸುವ ಎಲ್ಲರಿಗೂ ಬೆಂಬಲ, ಸಹಕಾರ ನೀಡುತ್ತೇವೆ ಎಂದರು.

ಬಿಬಿಎಂಪಿ ವಿಶೇಷ ಆಯುಕ್ತ ಜೈರಾಮ್ ರಾಯ್ಪುರ, ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಈ ಫರ್ಸ್ಟ್‌ ಸರ್ಕಲ್ ಇನ್ನೂ 25 ಜಿಲ್ಲೆಗಳಿಗೆ ವಿಸ್ತರಿಸಲಿದೆ. ಕ್ರಮೇಣ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಿದೆ. ಇನ್ನೂ 250ಕ್ಕೂ ಹೆಚ್ಚು ಉದ್ಯಮಿಗಳು ಇದರ ವ್ಯಾಪ್ತಿಗೆ ಸೇರಿಕೊಳ್ಳಲಿದ್ದಾರೆ. ಇದು ಆಂತರಿಕ ಅರ್ಥ ವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಬಿ.ಎನ್.ಬಚ್ಚೇಗೌಡ, ಫ್ರೀಡಂ ಆಪ್ ಸಂಸ್ಥಾಪಕ ಸುಧೀರ್, ಕರ್ನಾಟಕ ಗ್ಯಾಸ್ಟ್ರೊ ಎಂಟರಾಲಜಿ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕ ಡಾ.ನಾಗೇಶ್, ಫರ್ಸ್ಟ್ ಸರ್ಕಲ್ ಸದಸ್ಯರಾದ ಮನೋಹರ್ ಗೌಡ, ನಂದೀಶ್, ಇಂದ್ರೇಶ್, ಫಿಡೆಲಿಟಸ್ ಸಂಸ್ಥಾಪಕ, ಉದ್ಯಮಿ ಅಚ್ಚುತ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಫರ್ಸ್ಟ್‌ ಸರ್ಕಲ್ ಸಂಸ್ಥೆಯು ಪ್ರಾದೇಶಿಕ ಸಮುದಾಯದ ಏಳಿಗೆಗಾಗಿ ಕೊಡುಗೆ ನೀಡಲು ಸಿದ್ಧರಿರುವ ವೃತ್ತಿಪರರು, ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರನ್ನು ಒಳಗೊಂಡಿದೆ. ಜಾಗತಿಕ ನೆಟ್‌ವರ್ಕಿಂಗ್ ಮೂಲಕ ಉದ್ದಿಮೆಗಳನ್ನು ಬೆಳೆಸಲು ಫರ್ಸ್ಟ್‌ ಸರ್ಕಲ್ ಸಹಾಯ ಮಾಡುತ್ತಿದೆ. ಬಹಳ ಅಲ್ಪ ಕಾಲದಲ್ಲಿ ಸಂಸ್ಥೆಯು ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಆದಾಗ್ಯೂ ಬೆಂಗಳೂರು ನಗರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಕ್ರಮೇಣ ಕರ್ನಾಟಕದ ಎಲ್ಲಾ ನಗರಗಳಿಗೂ ವಿಸ್ತರಿಸಲಿದೆ. ಇದನ್ನೂ ಓದಿ: BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

ಪ್ರಸ್ತುತ ಫರ್ಸ್ಟ್‌ ಸರ್ಕಲ್ ಸಂಸ್ಥೆಯು 6 ವಲಯಗಳಲ್ಲಿ 150 ಸದಸ್ಯರು ಹಾಗೂ 500+ ಸದಸ್ಯರನ್ನು ಒಳಗೊಂಡಿದ್ದು, ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ 57 ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ಫಸ್ಟ್ ಸರ್ಕಲ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಾವಿರಾರು ಸಂಭಾವ್ಯ ಗ್ರಾಹಕರೊಂದಿಗಿರುವ ಹಲವು ವಲಯಗಳ ಹೂಡಿಕೆದಾರರು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳು, ಯಶಸ್ವಿ ವೃತ್ತಿಪರರು, ಅಧಿಕಾರಿಗಳು ಮಾತ್ರವಲ್ಲದೆ ದೇಶಾದ್ಯಂತ ಇರುವ ನವನವೀನ ಸ್ಟಾರ್ಟ್ ಅಪ್‌ಗಳು, ವ್ಯಾಪಾರೀ ಸಂಸ್ಥೆಗಳು ಮತ್ತು ಉದ್ಯಮಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಭಾರತದ ಅತ್ಯಂತ ದೊಡ್ಡ ಬೃಹತ್ ಬಿಸಿನೆಸ್ ಎಕ್ಸ್ ಪೋದಲ್ಲಿ ಪ್ರಪಂಚದ ವಿವಿಧ ಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅರಮನೆ ಮೈದಾನದ 6ನೇ ದ್ವಾರದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *