ನವದೆಹಲಿ: ಹಾಸನದ (Hassan) ಬೇಲೂರು (Belur) ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ್ (S.H.Rajshekar) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಲಿಂಗಾಯತ ಸ್ವಾಮೀಜಿಗಳು ಲಾಬಿ ಆರಂಭಿಸಿದ್ದಾರೆ. ದೆಹಲಿಯಲ್ಲಿ (New Delhi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸ್ವಾಮೀಜಿಗಳ ನಿಯೋಗ ರಾಜಶೇಖರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಿಯೋಗದಲ್ಲಿ ವಿಶ್ವಧರ್ಮ ಮಠ ಜಯಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಾಸನದ ವಿವಿಧ ತಾಲೂಕುಗಳ ವೀರಶೈವ ಲಿಂಗಾಯತ ಸ್ವಾಮೀಗಳು, ಬೌದ್ಧ ಬಿಕ್ಕು ಭಂತೆ ಭೋದಿ ಪ್ರಗ್ಯಾನಂದ, ಮುಸ್ಲಿಂ ಸಮುದಾಯದ ಸೋಯೇಲ್ ಭಾಗಿಯಾಗಿದ್ದರು. ಇದನ್ನೂ ಓದಿ: 4ನೇ ಬಾರಿ ಗೆಲ್ತಾರಾ ಸುಧಾಕರ್? – ಬ್ರೇಕ್ ಹಾಕಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ
ಕಾಂಗ್ರೆಸ್ ನಾಯಕರ ಭೇಟಿ ಬಳಿಕ ಮಾತನಾಡಿದ ವಿಶ್ವಧರ್ಮ ಮಠ ಜಯಬಸವಾನಂದ ಸ್ವಾಮಿಗಳು, ಹಾಸನದಲ್ಲಿ ಲಿಂಗಾಯತ ಸಮುದಾಯ ಮತದಾರರು ಹೆಚ್ಚಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ರಾಜಶೇಖರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಸರ್ವಧರ್ಮದ ಜನರನ್ನು ಸಮಾನ ರೀತಿಯಲ್ಲಿ ಕೊಂಡೊಯ್ಯುತ್ತಾರೆ. ರಾಜಶೇಖರ್ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಲಿಂಗಾಯತರಿಗೆ ಅವಕಾಶ ನೀಡಿದರೆ ಹಾಸನದ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಾಮ ಬೀರಲಿದೆ ಎಂದು ಹೇಳಿದರು.
ಬೌದ್ಧ ಬಿಕ್ಕು ಭಂತೆ ಭೋದಿ ಪ್ರಗ್ಯಾನಂದ ಮಾತನಾಡಿ, ಎರಡು ಬಾರಿ ಬಿಜೆಪಿಗೆ ಮತ ಚಲಾಯಿಸಿದೆ. ಮಠ-ಮಾನ್ಯಗಳಿಗೆ ಸರಿಯಾದ ರಾಜಾಶ್ರಯ ಸಿಗುತ್ತಿಲ್ಲ. ಹೀಗಾಗಿ ವ್ಯವಸ್ಥೆ ಬದಲಾಗಬೇಕಿದೆ. ರಾಜಶೇಖರ್ ಸಾಕಷ್ಟು ಕೆಲಸ ಮಾಡಿದ್ದಾರೆ. ನಮಗೂ ಸಾಕಷ್ಟು ದಾನ ನೀಡಿದ್ದಾರೆ. ಅವರ ಪರವಾಗಿ ಜನಾಭಿಪ್ರಾಯ ಇದೆ. ಹೀಗಾಗಿ ಕಾಂಗ್ರೆಸ್ ಅವರನ್ನು ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ
ಮುಸ್ಲಿಂ ಸಮುದಾಯದ ಸೋಯೇಲ್ ಮಾತನಾಡಿ, ನಾವು ರಾಜಶೇಖರ್ ಅವರಿಗೆ ಟಿಕೆಟ್ ಕೇಳಲು ಬಂದಿದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.