– ʻನಕ್ಸಲ್ ಮುಕ್ತʼವೆಂದು ಘೋಷಿಸಿದ ಬಳಿಕ ಮೊದಲ ಹಿಂಸಾ ಕೃತ್ಯ
ರಾಯ್ಪುರ: ನೆಲಬಾಂಬ್ ತೆಗೆಯುವ ಕಾರ್ಯಾಚರಣೆ ವೇಳೆ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಜಿಲ್ಲಾ ಮೀಸಲು ಪಡೆ (DRG)ಯ ಮೂವರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ (Chhattisgarh) ಕಂಕೇರ್ ಜಿಲ್ಲೆಯಲ್ಲಿ ಶನಿವಾರ (ಇಂದು) ನಡೆದಿದೆ. ಅಲ್ಲದೇ ಘಟನೆಯಲ್ಲಿ ಓರ್ವ ಜವಾನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಜಿಲ್ಲೆಯ ಗಡಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಇನ್ಸ್ಪೆಕ್ಟರ್ ಸುಖ್ರಾಮ್ ವಟ್ಟಿ, ಕಾನ್ಸ್ಟೆಬಲ್ಗಳಾದ ಕೃಷ್ಣ ಕೊಮ್ರಾ ಮತ್ತು ಸಂಜಯ್ ಗಢ್ಪಾಲೆ ಮೃತ ದುರ್ದೈವಿಗಳು. ಗಾಯಗೊಂಡ ಮತ್ತೊಬ್ಬ ಕಾನ್ಸ್ಟೆಬಲ್ ಪರಮಾನಂದ್ ಕೊಮ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂಬೈ ಕುಟುಂಬದ ಸಾವಿಗೆ ಕಲ್ಲಂಗಡಿ ಕಾರಣವಲ್ಲ – ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆ

ನಕ್ಸಲೈಟ್ಸ್ (Naxalites) ಈ ಹಿಂದೆಯೇ ಉದುಗಿಸಿಟ್ಟಿದ್ದ ಐಇಡಿಗಳನ್ನ ಪತ್ತೆಹಚ್ಚಲು ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ ತಂಡ ತೊಡಗಿತ್ತು. ಈ ವೇಳೆ ಒಂದು ಐಇಡಿಯನ್ನ ಪತ್ತೆ ಮಾಡಲಾಗಿತ್ತು. ಅದನ್ನು ನಿಷ್ಕ್ರಿಗೊಳಿಸುವ ಸಂದರ್ಭದಲ್ಲಿ ಸ್ಫೋಟಗೊಂಡು ಡಿಆರ್ಜಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಕಳೆದ ಮಾರ್ಚ್ 31 ರಂದು ದೇಶವನ್ನು ನಕ್ಸಲ್ ಮುಕ್ತವೆಂದು ಘೋಷಿಸಿದ ಬಳಿಕ ಛತ್ತೀಸ್ಗಢ ರಾಜ್ಯದಲ್ಲಿ ನಡೆದ ಮೊದಲ ಹಿಂಸಾಚಾರ ಕೃತ್ಯವಾಗಿದೆ. ಇದನ್ನೂ ಓದಿ: ಇರಾನ್ ಡ್ರೋನ್ ನಾಶ ಮಾಡಲು ಯುಎಇಗೆ ‘ಐರನ್ ಬೀಮ್’ ಲೇಸರ್ ಆಯುಧ ಕೊಟ್ಟ ಇಸ್ರೇಲ್
ಈ ಕುರಿತು ಬಸ್ಟರ್ ರೇಂಜ್ನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಮಾತನಾಡಿ, ನಕ್ಸಲರು ಶರಣಾದ ಬಳಿಕ ಬಸ್ತಾರ್ ಪ್ರದೇಶದಾದ್ಯಂತ ಭದ್ರತಾ ಪಡೆಗಳು ನೂರಾರು ಐಇಡಿಗಳನ್ನ ಪತ್ತೆಹೆಚ್ಚಿ ನಿಷ್ಕ್ರಿಯಗೊಳಿಸಿದ್ದವು. ಅದೇ ರೀತಿ ವಿವಿಧ ಕಂಕೇರ್ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಐಇಡಿ ಪತ್ತೆ ಮಾಡಿ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ 30 ರಂದು ಕೇಂದ್ರ ಗೃಹಸಚಿವ ಅಮಿತ್ ಶಾ, ಅವರು ಲೋಕಸಭೆಯಲ್ಲಿ ಮಾತನಾಡುವಾಗ ಭಾರತವನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ್ದರು. ಇದನ್ನೂ ಓದಿ: ಮದುವೆ ಸಾಲ ತೀರಿಸಲು ಮಗಳ ಮನೆಗೆ ತಾಯಿ ಕನ್ನ – 16.57 ಲಕ್ಷ ಮೌಲ್ಯದ 110 ಗ್ರಾಂ ಚಿನ್ನ ಕಳ್ಳತನ

