ಬೆಂಗಳೂರು: ಎರಡನೇ ಬಾರಿಯ ರಿಯಾಯಿತಿ ಸಂಚಾರ ದಂಡ (Discount On Traffic Fines) ಕಟ್ಟಲು ವಾಹನ ಸವಾರರಿಂದ ನಿರಾಸಕ್ತಿ ವ್ಯಕ್ತವಾಗಿದೆ. ಮೊದಲ ಅವಧಿಯಲ್ಲಿ ತಾ ಮುಂದು ನಾ ಮುಂದು ಅಂತಾ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ಅಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.
ಶೇ.50 ಡಿಸ್ಕೌಂಟ್ ಪ್ರಕಟಿಸಿದ ಬೆನ್ನಲ್ಲೇ ಸಾಲಿನಲ್ಲಿ ನಿಂತು ಫೈನ್ ಕಟ್ಟಿ ನಿಟ್ಟುಸಿರು ಬಿಟ್ಟಿದ್ದರು. ಕೇವಲ 9 ದಿನಗಳಲ್ಲಿ 150 ಕೋಟಿ ರೂ. ದಂಡ ಕಟ್ಟಿ 50 ಲಕ್ಷ ಕೇಸ್ಗಳು ಕ್ಲೀಯರ್ ಆಗಿತ್ತು. ಮತ್ತಷ್ಟು ಸಮಯ ವಿಸ್ತರಣೆ ಮಾಡುವಂತೆ ಸವಾರರಿಂದ ಮನವಿಗಳು ಬಂದಿತ್ತು. ಈ ಬಗ್ಗೆ ರಾಜ್ಯ ಕಾನೂನು ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ ವೀರಪ್ಪ ಸಭೆ ನಡೆಸಿ ದಂಡದ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇದನ್ನೂ ಓದಿ: ತಾಯಿ, ಇಬ್ಬರು ಮಕ್ಕಳ ಸಜೀವ ದಹನ ಕೇಸ್ – ಅವಘಡಕ್ಕೆ ಎಸಿ ತಾಂತ್ರಿಕ ದೋಷವೇ ಕಾರಣ
ಇದೀಗ 14 ದಿನಗಳ ಎರಡನೇ ಬಾರಿಯ ರಿಯಾಯಿತಿಯಲ್ಲಿ ದಂಡ ಪಾವತಿಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಮಾರ್ಚ್ 4 ರಿಂದ ಈವರೆಗೆ ಕೇವಲ 2.68 ಕೋಟಿ ರೂ. ದಂಡ ಪಾವತಿಯಾಗಿದೆ. ನಾಲ್ಕು ದಿನಗಳಲ್ಲಿ 93 ಸಾವಿರ ಟ್ರಾಫಿಕ್ ಕೇಸ್ಗಳು ವಿಲೇವಾರಿಯಾಗಿವೆ. ಮಾ.4 ರಂದು 30,141 ಕೇಸ್ ಗಳಿಗೆ 86.46 ಲಕ್ಷ ದಂಡ ವಸೂಲಿಯಾದರೆ, ಮಾ.5 ರಂದು 23,214 ಪ್ರಕರಣಗಳಿಂದ 66.62 ಲಕ್ಷ ರೂ. ದಂಡ ವಸೂಲಿಯಾಗಿದೆ. ಮಾ.6 ರಂದು 30,312 ಕೇಸ್ ಗಳಿಗೆ 86.75 ಲಕ್ಷ ರೂ. ದಂಡವನ್ನು ಸವಾರರು ಪಾವತಿ ಮಾಡಿದ್ದಾರೆ. ಮಾರ್ಚ್ 7 ರಂದು ಮಧ್ಯಾಹ್ನದ ವೇಳೆಗೆ 9,865 ಕೇಸ್ಗಳಿಂದ 28.32 ಲಕ್ಷ ರೂ. ದಂಡ ವಸೂಲಿಯಾಗಿದೆ.