ಬಳ್ಳಾರಿ: ಹೊಸ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ನೆಲೆ ಕಂಡುಕೊಳ್ಳಲು ಹೊರಟಿರುವ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಸುದ್ದಿಗೋಷ್ಠಿಯಿಂದ ಕೈ ಮುಗಿದು ಹೊರ ನಡೆದ ಘಟನೆ ನಡೆದಿದೆ.
ನವಂಬರ್ ಒಂದರಂದು ಉದ್ಘಾಟನೆ ಯಾಗಲಿರುವ ಹೊಸ ಪಕ್ಷದ ಬಗ್ಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಇಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೂಡ್ಲಿಗಿಯಲ್ಲೇ ಹೊಸ ಪಕ್ಷ ಉದ್ಘಾಟನೆ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ರು.
ಇದಕ್ಕೆ ಸಿಟ್ಟಾದ ಅನುಪಮಾ ಶೆಣೈ ಮಾಧ್ಯಮವರು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂತಾ ಕೆಟ್ಟದಾಗಿ ಬಿಂಬಿಸಿದ್ದೀರಿ. ಆದ್ರೆ ವಾಸ್ತವವಾಗಿ ಬಳ್ಳಾರಿ ಹಾಗಿಲ್ಲ. ಇಲ್ಲಿನ ಜನರು ಮುಗ್ದರು ಅಂತಾ ಪತ್ರಕರ್ತರಿಗೆ ಮರುಪ್ರಶ್ನೆ ಎಸೆದರು. ಇದಕ್ಕೆ ಪ್ರತಿ ಉತ್ತರ ನೀಡಿದ ಪತ್ರಕರ್ತರು ನಾವೂ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂದಿಲ್ಲ. ನ್ಯಾಯಮೂರ್ತಿ ಸಂತೋಷ ಹೆಗಡೆ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಹೇಳಿದ್ದರು. ಈ ಹಿಂದೆ ನೀವೂ ಕೂಡಾ ಕೂಡ್ಲಿಗಿಯಲ್ಲಿ ‘ಲಿಕ್ಕರ್ ಲಾಬಿ’ ಎಂದು ಆರೋಪಿಸಿದ್ದು ಮರೆತುಬಿಟ್ಟರಾ ಎಂದು ಮರು ಪ್ರಶ್ನೆ ಎಸೆದರು.
ಪತ್ರಕರ್ತರ ಉತ್ತರ, ಪ್ರತಿಯುತ್ತರಕ್ಕೆ ಏಕಾಎಕಿ ಸಿಟ್ಟಾದ ಅನುಪಮಾ ಶೆಣೈ, ಅರ್ಧಕ್ಕೆ ಮೊಟಕುಗೊಳಿಸಿ ಪತ್ರಕರ್ತರಿಗೆ ಕೈ ಮುಗಿದು ಸಿಟ್ಟಿನಿಂದಲೇ ಸುದ್ದಿಗೋಷ್ಠಿಯಿಂದ ಹೊರನಡೆದರು.
ನವೆಂಬರ್ ಒಂದರಂದು ಹೊಸ ಪಕ್ಷ ಉದ್ಘಾಟನೆ ಮಾಡಲಿರುವ ಅನುಪಮಾ ಶೆಣೈ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದರೆ ಕ್ಷೇತ್ರ ಯಾವುದು ಎಂದು ಈಗಲೇ ಹೇಳವುದಿಲ್ಲವೆಂದು ಸ್ಪಷ್ಟಪಡಿಸಿದರು.
224 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅನುಪಮಾ ಶೆಣೈ ಪ್ಲಾನ್ ರೂಪಿಸಿದ್ದಾರೆ. ಆದ್ರೆ ಅನುಪಮಾ ಹೊಸದಾಗಿ ರಾಜಕೀಯಕ್ಕೆ ಬರುವವರನ್ನೆ ಅಭ್ಯರ್ಥಿಗಳನ್ನಾಗಿ ಮಾಡಿ ಪಕ್ಷ ಕಟ್ಟಲು ಚಿಂತನೆ ನಡೆಸಿದ್ದಾರೆ.